Publish Date: Thu, 25 Jul 2024 (15:08 IST)
Updated Date: Thu, 25 Jul 2024 (15:10 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೇಗಾದರೂ ಪಾರಾಗಲೇ ಬೇಕು ಎಂದು ಶತಾಯ ಗತಾಯ ಪ್ರಯತ್ನಿಸುತ್ತಿರುವ ನಟ ದರ್ಶನ್ ಈಗ ಯಾವ ಕಾಂಪ್ರಮೈಸ್ ಗೂ ಸಿದ್ಧ. ಆದರೆ ದರ್ಶನ್ ಗೆ ಕ್ಷಮೆ ನೀಡಲು ರೇಣುಕಾಸ್ವಾಮಿ ಕುಟುಂಬ ತಯಾರಿದೆಯಾ? ಈ ಬಗ್ಗೆ ರೇಣುಕಾಸ್ವಾಮಿ ಹೇಳಿದ್ದೇನು ಇಲ್ಲಿದೆ ವಿವರ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದ ದರ್ಶನ್ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ರೇಣುಕಾಸ್ವಾಮಿ ಕುಟುಂಬದ ಜೊತೆ ಕಾಂಪ್ರಮೈಸ್ ಆಗುವುದು. ರೇಣುಕಾಸ್ವಾಮಿ ಕುಟುಂಬ ದರ್ಶನ್ ಜೊತೆ ಕಾಂಪ್ರಮೈಸ್ ಮಾಡಿಕೊಂಡರೆ ಕೇಸ್ ಕೊಂಚ ಸಡಿಲವಾಗಬಹುದು ಎಂಬ ವಿಶ್ವಾಸವಿದೆ.
ಆದರೆ ಇದಕ್ಕೆ ರೇಣುಕಾಸ್ವಾಮಿ ಕುಟುಂಬಸ್ಥರು ತಯಾರಿದ್ದಾರಾ ಎನ್ನುವುದು ಪ್ರಶ್ನೆ. ಈ ಬಗ್ಗೆ ಮಾಧ್ಯಮಗಳಿಗೆ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಗೆ ನಾವು ಒಪ್ಪಲ್ಲ ಎಂದಿದ್ದಾರೆ. ನನ್ನ ಮಗನಿಗೆ ನ್ಯಾಯ ದೊರಕಿಸಿಕೊಡಬೇಕು ಅಷ್ಟೇ ನಮಗಿರುವ ಗುರಿ ಎಂದಿದ್ದಾರೆ.
ದರ್ಶನ್ ಇರಲಿ ಯಾರೇ ಇರಲಿ, ನಮ್ಮ ಮಗ ಕೊನೆಗಳಿಗೆಯಲ್ಲಿ ಏನು ನೋವು ಅನುಭವಿಸಿದ್ದಾನೆ ಎಂದು ನಮಗೆ ಗೊತ್ತು. ಹೀಗಾಗಿ ಅವನ ಸಾವಿಗೆ ನ್ಯಾಯ ಒದಗಿಸಿಕೊಡುವುದೇ ನಮ್ಮ ಮುಂದಿರುವುದು. ಅದು ಬಿಟ್ಟು ಯಾವುದೇ ಕಾಂಪ್ರಮೈಸ್ ಗೆ ನಾವು ಸಿದ್ಧ ಇಲ್ಲ. ಇದುವರೆಗೂ ಸರ್ಕಾರ, ಪೊಲೀಸರು, ಕೋರ್ಟ್ ವಿಚಾರಣೆ ನಮಗೆ ತೃಪ್ತಿ ತಂದಿದೆ. ಕಾನೂನು ಪ್ರಕಾರ ಏನು ನಡೆಯಬೇಕೋ ಅದು ನಡೆಯಲಿ ಎಂದಿದ್ದಾರೆ.