Publish Date: Wed, 11 Sep 2024 (08:51 IST)
Updated Date: Wed, 11 Sep 2024 (08:56 IST)
ಬೆಂಗಳೂರು: ಒಂದೆಡೆ ತಮ್ಮ ಗಾಡ್ ಫಾದರ್ ನಟ ದರ್ಶನ್ ಜೈಲಿನಲ್ಲಿದ್ದರೆ ಇನ್ನೊಂದೆಡೆ ನಟಿ ರಚಿತಾ ರಾಮ್ ನಿನ್ನೆ ಸಂಜೆ ಸೋಷಿಯಲ್ ಮೀಡಿಯಾದಲ್ಲಿ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ.
ನಟ ದರ್ಶನ್ ರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ಬಂದಿದ್ದ ರಚಿತಾ, ರಾಜ ಯಾವತ್ತೂ ರಾಜನ ಥರಾ ಇರಬೇಕು. ಅವರನ್ನು ಈ ರೀತಿ ನೋಡಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು. ಇದಾದ ಬಳಿಕ ದರ್ಶನ್ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು.
ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧದ ಆರೋಪ ಪಟ್ಟಿ ಬಟಾ ಬಯಲಾಗಿದ್ದು ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧವೂ ಜಗಜ್ಜಾಹೀರಾಗಿದೆ. ಇದೆಲ್ಲದರ ಬೆನ್ನಲ್ಲೇ ನಟಿ ರಚಿತಾ ರಾಮ್, ತಮ್ಮ ಇನ್ ಸ್ಟಾಗ್ರಾಂನಲ್ಲಿ ಮುಖವಾಡ ಹಾಕಿಕೊಂಡು ಬದುಕುವವರಿಗೆ ಇಂದು ಇಮೇಜ್ ಕಾಪಾಡಿಕೊಂಡು ಬರಬೇಕಾಗುತ್ತದೆ. ಆದರೆ ನೈಜ ವ್ಯಕ್ತಿಗಳಿಗೆ ಅದರ ಅಗತ್ಯವಿರುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಅವರ ಈ ಪೋಸ್ಟ್ ನ್ನು ನೋಡಿದ ದರ್ಶನ್ ಅಭಿಮಾನಿಗಳು ಎರಡು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದು ಇನ್ನಿಲ್ಲದಂತೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ನಿಯತ್ತು ಅಂದರೆ ನಿಮ್ಮ ಹಾಗಿರಬೇಕು. ನೀವು ಕರೆಕ್ಟ್ ಆಗಿ ಹೇಳಿದ್ರಿ ಮೇಡಂ. ಡಿ ಬಾಸ್ ಮುಖವಾಡ ಹಾಕಿಕೊಂಡಿರುವ ವ್ಯಕ್ತಿಯಲ್ಲ. ಹೀಗಾಗಿ ಅವರಿಗೆ ಇಮೇಜ್ ನಿಭಾಯಿಸಬೇಕಾದ ಅಗತ್ಯವಿಲ್ಲ ಎಂದಿದ್ದಾರೆ. ಆದರೆ ಮತ್ತೆ ಕೆಲವರು ಇದನ್ನು ತಪ್ಪಾಗಿ ತಿಳಿದಿದ್ದು, ಇಷ್ಟು ದಿನ ನಿಮ್ಮ ಬಗ್ಗೆ ಏನೋ ಅಂದುಕೊಂಡಿದ್ದೆವು. ಆದರೆ ಈಗ ಈ ಡಿ ಬಾಸ್ ನ ಮುಖವಾಡ ಹಾಕಿಕೊಂಡ ವ್ಯಕ್ತಿ ಎಂದು ನಿಮ್ಮ ಬಗ್ಗೆ ಇದ್ದ ಗೌರವ ಹೋಯ್ತು ಎಂದಿದ್ದಾರೆ. ರಚಿತಾ ಇಲ್ಲಿ ದರ್ಶನ್ ಹೆಸರು ಹೇಳಿಲ್ಲ. ಆದರೆ ಈ ಪೋಸ್ಟ್ ದರ್ಶನ್ ಕುರಿತಾಗಿಯೇ ಬರೆದಿರುವುದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.