Publish Date: Fri, 13 Sep 2024 (10:20 IST)
Updated Date: Fri, 13 Sep 2024 (10:26 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಳಾಗಲು ಇದುವೇ ಕಾರಣ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.
ಸಿನಿಮಾದಲ್ಲಿ ಹೀರೋ ಆಗಿ ಮಿಂಚುವ ದರ್ಶನ್ ನಿಜ ಜೀವನದಲ್ಲಿ ಪದೇ ಪದೇ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಈಗಂತೂ ಒಬ್ಬನನ್ನು ಕೊಲೆ ಮಾಡಿದ ಆರೋಪಕ್ಕೊಳಗಾಗಿದ್ದಾರೆ. ಅವರ ರಾಕ್ಷಸೀ ಕೃತ್ಯಗಳು ಒಂದೊಂದಾಗಿ ಹೊರಬರುವುದು ನೋಡಿದರೆ ಅವರ ಅಭಿಮಾನಿಗಳಿಗೇ ಅಚ್ಚರಿಯಾಗುತ್ತದೆ.
ದರ್ಶನ್ ಇಷ್ಟರಮಟ್ಟಿಗೆ ಹಾಳಾಗಲು ಕಾರಣವೇನು ಎಂದು ನಟ ಜಗ್ಗೇಶ್ ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ದರ್ಶನ್ 25 ಕೋಟಿ ದುಡಿಯುವ ಮತ್ತು ನೂರಾರು ಜನರಿಗೆ ಕೆಲಸ ಕೊಡುವ ಹೀರೋ. ಅವರನ್ನು ಪ್ರೀತಿಸುವ ಸಾಕಷ್ಟು ಜನರಿದ್ದಾರೆ. ಆದರೆ ದರ್ಶನ್ ಗೆ ಮಾರ್ಗದರ್ಶನ ನೀಡುವವರ ಕೊರತೆಯಿದೆ. ಆತ ಸಹವಾಸ ದೋಷದಿಂದಲೇ ಕೆಟ್ಟ. ಮನುಷ್ಯನಿಗೆ ತಾಳ್ಮೆ ಮುಖ್ಯ, ಕೋಪ ಒಳ್ಳೆಯದಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.
ನನ್ನ ಪ್ರಕಾರ ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕೆ ಮಾಡಿಕೊಂಡು ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದ ವ್ಯಕ್ತಿ ಮೇಲೆ ಪೊಲೀಸರಿಗೆ ದೂರು ಕೊಟ್ಟು ಕಾನೂನಿನ ಮೂಲಕ ಪಾಠ ಕಲಿಸಿ, ನೋಡಿ ನೀವು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಹೆಜ್ಜೆ ಹಾಕಿದರೆ ಇದೇ ಗತಿಯಾಗುತ್ತದೆ ಎಂದು ಸಮಾಜಕ್ಕೆ ದೊಡ್ಡ ಸಂದೇಶ ಕೊಡಬಹುದಿತ್ತು. ಆದರೆ ಆಗಿದ್ದೇ ಬೇರೆ. ಇದು ಬೇಸರ ಸಂಗತಿ ಎಂದು ಜಗ್ಗೇಶ್ ಹೇಳಿದ್ದಾರೆ.