Publish Date: Thu, 25 Nov 2021 (17:18 IST)
Updated Date: Thu, 25 Nov 2021 (17:19 IST)
ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ್ದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಇಂದು ಹಂಸಲೇಖ ವಿಚಾರಣೆಗೆ ಬಸವನಗುಡಿ ಪೊಲೀಸರ ಎದುರು ಹಾಜರಾಗಿದ್ದಾರೆ.
ಈ ವೇಳೆ ತನಿಖಾಧಿಕಾರಿಗಳ ಮುಂದೆ ಹಂಸಲೇಖ ಕಣ್ಣೀರು ಹಾಕಿದರು ಎನ್ನಲಾಗಿದೆ. ದಿವಂಗತ ಸ್ವಾಮೀಜಿಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ನನಗೆ ಅಂಥಾ ಯಾವುದೇ ಉದ್ದೇಶವೂ ಇರಲಿಲ್ಲ. ಮಾತಿನ ಭರದಲ್ಲಿ ಹೇಳಿದೆ. ನನ್ನ ಹೇಳಿಕೆಗೆ ಹೆಂಡತಿಯೇ ಆಕ್ಷೇಪ ವ್ಯಕ್ತಪಡಿಸಿದ್ದಳು. ನಾನು ಅಂಥಾ ಹೇಳಿಕೆ ನೀಡಿದ್ದರಿಂದ ತಪ್ಪಾಗಿದೆ. ಯಾವುದೇ ಜಾತಿ, ಧರ್ಮವನ್ನು ನಿಂದಿಸುವ ಉದ್ದೇಶ ನನ್ನದಾಗಿರಲಿಲ್ಲ. ಈ ಹೇಳಿಕೆಯಿಂದ ನನ್ನ ವೃತ್ತಿ ಜೀವನದಲ್ಲಿ ಹಿನ್ನಡೆಯಾಗಿದೆ. ತುಂಬಾ ನೋವು ಅನುಭವಿಸಿದ್ದೇನೆ ಎಂದು ತನಿಖಾಧಿಕಾರಿಗಳ ಮುಂದೆ ಭಾವುಕರಾಗಿ ಹೇಳಿದ್ದಾರೆ ಎನ್ನಲಾಗಿದೆ.