Publish Date: Wed, 17 Apr 2024 (15:14 IST)
Updated Date: Wed, 17 Apr 2024 (15:16 IST)
ಬೆಂಗಳೂರು: ನಿನ್ನೆ ನಿಧನರಾಗಿದ್ದ ಹಿರಿಯ ನಟ ದ್ವಾರಕೀಶ್ ಅಂತಿಮ ವಿಧಿ ವಿಧಾನಗಳು ಇಂದು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಚಿತಾಗಾರದಲ್ಲಿ ನೆರವೇರಿತು.
ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಿದವು. ಈ ವೇಳೆ ದ್ವಾರಕೀಶ್ ಅವರ ಐವರು ಪುತ್ರರೂ ಇದ್ದರು. ಹಿರಿಯ ಪುತ್ರ ದ್ವಾರಕೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಇದಕ್ಕೆ ಮೊದಲು ವಿವಿಧ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ನಿನ್ನೆ ಬೆಳಿಗ್ಗಿನ ಜಾವ ದ್ವಾರಕೀಶ್ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅಭಿಮಾನಿಗಳು, ಕಲಾವಿದರು, ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದರು. ಪ್ರಧಾನಿ ಮೋದಿ ಕೂಡಾ ದ್ವಾರಕೀಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.
ಹಿರಿಯ ನಟನಿಗೆ ಇಂದು ಸರ್ಕಾರೀ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಯಿತು. ಇದಕ್ಕೆ ಮೊದಲು ಇಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಈ ವೇಳೆ ನಟರಾದ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು ಬಂದು ಅಂತಿಮ ದರ್ಶನ ಪಡೆದರು.
ಕಿಚ್ಚ ಸುದೀಪ್, ನಟಿ ಶ್ರುತಿ ಅಂತಿಮ ದರ್ಶನದ ವೇಳೆ ತೀವ್ರ ಭಾವುಕರಾಗಿದ್ದರು. ಚೆನ್ನೈನಲ್ಲಿ ಶೂಟಿಂಗ್ ನಲ್ಲಿದ್ದ ಕಿಚ್ಚ ಸುದೀಪ್ ಇಂದು ಅಂತಿಮ ದರ್ಶನ ಪಡೆಯಲೆಂದೇ ಬಂದಿದ್ದರು. ಇದೀಗ ದ್ವಾರಕೀಶ್ ಎಂಬ ನಟ ಬರೀ ನೆನಪು ಮಾತ್ರ.