Publish Date: Wed, 11 Dec 2019 (15:34 IST)
Updated Date: Wed, 11 Dec 2019 (15:36 IST)
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಥಾ ಹಂದರದ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೊರಗೊಂದು ಪ್ರೇಕ್ಷಕರನ್ನು ಸದಾ ಕಾಡುತ್ತಲೇ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೌಟುಂಬಿಕ ಕಥಾ ಹಂದರದ ಸಿನಿಮಾಗಳಲ್ಲಿ ನಟಿಸಬೇಕೆಂಬುದಂತೂ ಅಭಿಮಾನಿಗಳನ್ನು ಯಾವತ್ತಿಗೂ ಆವರಿಸಿಕೊಂಡಿರೋ ಬಯಕೆ. ಅಂಥವರಿಗೆಲ್ಲ ಈ ವರ್ಷ ಡಬಲ್ ಧಮಾಕಾ.
ಯಾಕೆಂದರೆ, ಈ ವರ್ಷ ದರ್ಶನ್ ಯಜಮಾನ ಎಂಬ ಫ್ಯಾಮಿಲಿ ಕಥಾನಕದಲ್ಲಿ ನಟಿಸಿದ್ದರು. ಆ ಚಿತ್ರ ಸೂಪರ್ ಹಿಟ್ ಆಗಿದ್ದೀಗ ಇತಿಹಾಸ. ಅವರೀಗ ಎರಡನೇ ಸಲ ಒಡೆಯ ಚಿತ್ರದೊಂದಿಗೆ ಮತ್ತೆ ಕೌಟುಂಭಿಕ ಕಥೆಯೊಂದಿಗೆ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ. ಈ ಸಿನಿಮಾ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇದು ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಚಿತ್ರ. ಸಣಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ದರ್ಶನ್ ಅಭಿನಯದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಯೂ ಒಡೆಯನಿಗಿದೆ. ಎಂ.ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಒಡೆಯ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್. ಇಲ್ಲಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಆಪ್ತವಾಗುವಂಥಾ ಅಂಶಗಳು ಸಾಕಷ್ಟಿವೆ. ಕೌಟುಂಬಿಕ ಮೌಲ್ಯ ಸಾರುವ ಈ ಕಥೆಯಲ್ಲಿ ಹೈ ವೋಲ್ಟೇಜ್ ಆಕ್ಷನ್ ಸನ್ನಿವೇಶಗಳಿದ್ದಾವೆ. ಅದೆಲ್ಲವೂ ಟೀಸರ್ನಲ್ಲಿ ಸ್ಪಷ್ಟವಾಗಿ ಕಾಣಿಸಿರೋದರಿಂದಲೇ ಮಿಲಿಯನ್ನು ಗಟ್ಟಲೆ ವೀವ್ಸ್ ಪಡೆದುಕೊಂಡು ಟ್ರೆಂಡಿಂಗ್ನಲ್ಲಿದೆ. ಇದುವೇ ಒಡೆಯನ ಮಹಾ ಗೆಲುವಿನ ಮುನ್ಸೂಚನೆಯಂತಿದೆ.
ಇಲ್ಲಿ ಅಣ್ಣ ತಮ್ಮಂದಿತ ಬಾಂಧವ್ಯದ ಸುತ್ತ ಹರಡಿಕೊಂಡಿರೋ ಮನ ಮಿಡಿಯುವ ಕಥೆಯಿದೆ. ಅಷ್ಟಕ್ಕೂ ದರ್ಶನ್ ಇಂಥಾ ಕೌಟುಂಬಿಕ ಕಥಾನಕಗಳಲ್ಲಿ ಮನದುಂಬಿ ನಟಿಸುತ್ತಾರೆ. ಈ ಸಿನಿಮಾದಲ್ಲಿಯಂತೂ ದರ್ಶನ್ ಅವರು ಖದರ್ಗೂ, ಇಲ್ಲಿನ ಕಥೆ ಮತ್ತು ಟೈಟಲ್ಲಿಗೂ ಸೂಪರ್ ಕಾಂಬಿನೇಷನ್ ಸಂಭವಿಸಿದೆ. ದರ್ಶನ್ ಅವರಿಗೆ ಹೇಳಿ ಮಾಡಿಸಿದಂಥಾ ಪಾತ್ರವೇ ಇಲ್ಲಿ ಅವರ ಪಾಲಿಗೆ ಒಲಿದು ಬಂದಂತಿದೆ. ಈಗಾಗಲೇ ಒಡೆಯನ ಡೈಲಾಗುಗಳಿಗೆ ಪ್ರೇಕ್ಷಕರೆಲ್ಲ ಥಿಲ್ ಆಗಿದ್ದಾರೆ. ಪ್ರೇಕ್ಷಕರು ಹುಚ್ಚೆದ್ದಿದ್ದಾರೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಒಡೆಯ ಈ ವರ್ಷದ ಎಲ್ಲ ದಾಖಲೆಗಳನ್ನೂ ಬ್ರೇಕ್ ಮಾಡಿ ಅಬ್ಬರಿಸೋದರಲ್ಲಿ ಯಾವ ಸಂದೇಹವೂ ಇಲ್ಲ.