Publish Date: Thu, 30 Oct 2025 (13:20 IST)
Updated Date: Thu, 30 Oct 2025 (13:22 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಅವರ ಪಕ್ಕದ ಮನೆಯ ನಿವಾಸಿಯೊಬ್ಬರು ದೂರು ದಾಖಲಿಸಿದ್ದಾರೆ. ಇದು ಬೇರೆ ನಟರೂ ಎಚ್ಚೆತ್ತುಕೊಳ್ಳಬೇಕಾದ ವಿಚಾರವಾಗಿದೆ.
ಸಾಮಾನ್ಯವಾಗಿ ಹೀರೋಗಳ ಮನೆ ಮುಂದೆ ದಿನ ಬೆಳಗಾದರೆ ಅಭಿಮಾನಿಗಳ ದಂಡೇ ಇರುತ್ತದೆ. ಅದರಲ್ಲೂ ಬರ್ತ್ ಡೇ ದಿನವಂತೂ ಕೇಳುವುದೇ ಬೇಡ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ದಂಡು ಕಂಡುಬರುತ್ತದೆ. ಇದೀಗ ಅಂತಹದ್ದೇ ಒಂದು ಕಾರಣಕ್ಕೆ ಧ್ರುವ ಮೇಲೆ ಕೇಸ್ ದಾಖಲಾಗಿದೆ.
ಧ್ರುವ ಸರ್ಜಾ ನೆರೆ ಮನೆ ನಿವಾಸಿ ಮನೋಜ್ ಎಂಬವರು ದೂರು ನೀಡಿದ್ದಾರೆ. ಧ್ರುವ ಸರ್ಜಾ ಮನೆ ಮುಂದೆ ನಿತ್ಯ ಹಲವಾರು ಫ್ಯಾನ್ಸ್ ಬರುತ್ತಾರೆ. ಬಂದವರು ನಮ್ಮ ಮನೆ ಮುಂದೆ ವಾಹನ ಪಾರ್ಕ್ ಮಾಡುತ್ತಾರೆ. ಕಂಪೌಂಡ್ ಗೆ ಉಗುಳುತ್ತಾರೆ. ಅಲ್ಲಿಯೇ ನಿಂತುಕೊಂಡು ಧೂಮಪಾನ ಮಾಡಿಕೊಳ್ಳುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದಾರೆ.
ಸ್ಯಾಂಡಲ್ ವುಡ್ ನ ಅನೇಕ ನಟರು ಇದೇ ಕಾರಣಕ್ಕೆ ಬರ್ತ್ ಡೇಯನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದೇ ಇಲ್ಲ. ಅಭಿಮಾನಿಗಳ ಅಬ್ಬರಕ್ಕೆ ಅಕ್ಕಪಕ್ಕದ ವಾಸಿಗಳು ತೊಂದರೆ ಅನುಭವಿಸುತ್ತಾರೆ. ಇದೀಗ ಧ್ರುವ ಸರ್ಜಾ ಕೂಡಾ ತಮ್ಮ ಫ್ಯಾನ್ಸ್ ನಿಂದಾಗಿ ಪ್ರಕರಣ ಎದುರಿಸುವ ಸ್ಥಿತಿ ಬಂದಿದೆ.