Publish Date: Tue, 11 Jun 2024 (11:33 IST)
Updated Date: Tue, 11 Jun 2024 (11:35 IST)
ಬೆಂಗಳೂರು: ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದರ್ಶನ್ ರನ್ನು ಅರೆಸ್ಟ್ ಮಾಡಲಾಗಿದೆ. ನಟಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ವ್ಯಕ್ತಿಯನ್ನು ದರ್ಶನ್ ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದೇ ಜನಪ್ರಿಯತೆ ಗಳಿಸಿರುವ ನಟ ಪೊಲೀಸ್ ಠಾಣೆ ಮೆಟ್ಟಲೇರುತ್ತಿರುವುದು ಇದೇ ಮೊದಲಲ್ಲ. ಇದಕ್ಕೆ ಮೊದಲು ಪತ್ನಿ ವಿಜಯಲಕ್ಷ್ಮಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದರು. ಅದಾದ ಬಳಿಕ ಈಗ ಹಿರಿಯರ ಮಧ್ಯಸ್ಥಿಕೆಯಿಂದ ಗಂಡ-ಹೆಂಡತಿ ಸಂಬಂಧ ಸರಿ ಹೋಗಿದೆ.
ಆದರೆ ಈಗ ದರ್ಶನ್ ಆಪ್ತೆ ಪವಿತ್ರಾ ಗೌಡ ವಿಚಾರದಲ್ಲಿ ದರ್ಶನ್ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ರೇಣುಕಾಸ್ವಾಮಿ ಎಂಬವರು ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಈತ ಇತ್ತೀಚೆಗೆ ಹತ್ಯೆಯಾಗಿದ್ದಾನೆ. ಆತನ ಹತ್ಯೆ ಪ್ರಕರಣದ ಸುಳಿವು ಹಿಡಿದು ಹೋದ ಪೊಲೀಸರಿಗೆ ದರ್ಶನ್ ಕೈವಾಡ ಕಂಡುಬಂದಿದೆ.
ದರ್ಶನ್ ಸೂಚನೆ ಮೇರೆಗೇ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಈಗ ದರ್ಶನ್ ರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣ ಈಗ ಸಾಕಷ್ಟು ಸೆನ್ಸೇಷನ್ ಸೃಷ್ಟಿಸಿದೆ.