ಬೆಂಗಳೂರು: ಸಹಕಲಾವಿದೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿಯಾಗಿದ್ದ ನಟ ಮಡೆನೂರು ಮನುಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಕನ್ನಡ ಚಿತ್ರರಂಗದ ಖ್ಯಾತ ನಟರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ, ನಟನಿಗೆ ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧವನ್ನು ಫಿಲ್ಮ್ ಚೇಂಬರ್ ತೆರವು ಮಾಡಿದೆ.
ಮನು ಅವರದ್ದು ಎನ್ನಲಾದ ವೈರಲ್ ಆದ ಆಡಿಯೋದಲ್ಲಿ ನಟರಾದ ಶಿವರಾಜ್ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿತ್ತು. ಆದರೆ ಮನು ಮೇಲೆ ಹೇರಿದ್ದ ನಿಷೇಧವನ್ನು ತೆರೆವುಗೊಳಿಸಲು ತೀರ್ಮಾನಿಸಲಾಗಿದೆ.
ಮಡೆನೂರು ಮನು ಅವರು ನಟರಾದ ಶಿವರಾಜ್ಕುಮಾರ್, ಧ್ರುವ ಸರ್ಜಾ ಮತ್ತು ದರ್ಶನ್ ಅವರಿಗೆ ಕ್ಷಮೆಯಾಚಿಸಿ ಪತ್ರ ಬರೆದಿದ್ದು, ಆ ಪತ್ರವನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರಿಗೆ ನೀಡಿದ್ದಾರೆ.
ಮಡೆನೂರು ಮನು ಪತ್ರ ಸ್ವೀಕರಿಸಿದ ಉಮೇಶ್ ಬಣಕಾರ್ ಅವರು, ಈಗಾಗಲೇ ಮನು ಬಹಿರಂಗವಾಗಿ ಮೂವರು ನಟರ ಬಳಿ ಕ್ಷಮೆ ಕೇಳಿದ್ದಾರೆ.
ಹೀಗಾಗಿ ಅವರಿಗೆ ಒಂದು ಅವಕಾಶ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ನಟನಾಗಿ ಕನ್ನಡ ಚಿತ್ರರಂಗದ ಹೆಸರು ಕಾಪಾಡಲಿ ಎಂದು ಮನುಗೆ ಉಮೇಶ್ ಬಣಕಾರ್ ಬುದ್ಧಿವಾದ ಹೇಳಿದ್ದಾರೆ.