ಬೆಂಗಳೂರು: ಬಹುನಿರೀಕ್ಷೆಯಿಂದ ಆರಂಭವಾಗಿದ್ದು ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಎರಡನೇ ವಾರಕ್ಕೇ ಬಂದ್ ಆಗಿದೆ. ಇದೀಗ ರಾತ್ರೋ ರಾತ್ರಿ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.
ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ನಲ್ಲಿ ಬಿಗ್ ಬಾಸ್ 12 ರ ಸೆಟ್ ಹಾಕಲಾಗಿತ್ತು. ಆದರೆ ಪರಿಸರ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನಲೆಯಲ್ಲಿ ಜಾಲಿವುಡ್ ಸ್ಟುಡಿಯೋಸ್ ತಹಶೀಲ್ದಾರ್ ಬೀಗ ಹಾಕಿಸಿದ್ದಾರೆ. ಇದರ ಬೆನ್ನಲ್ಲೇ ಈಗಷ್ಟೇ ಎಲ್ಲಾ ಸ್ಪರ್ಧಿಗಳನ್ನೂ ಹೊರಕ್ಕೆ ಕರೆತರಲಾಗಿದೆ.
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಬಿಗ್ ಬಾಸ್ ಮನೆ ನಿರ್ಮಾಣ ಮಾಡಲಾಗಿತ್ತು. ಸ್ಪರ್ಧಿಗಳ ಜೊತೆ ತಂತ್ರಜ್ಞರು ಸೇರಿ 700 ಮಂದಿ ಶೋಗಾಗಿ ಕೆಲಸ ಮಾಡುತ್ತಿದ್ದರು. ಅರಮನೆ ಮಾದರಿಯಲ್ಲಿ ವೈಭವದ ಸೆಟ್ ಹಾಕಲಾಗಿತ್ತು. ಆದರೆ ಈಗ ಎಲ್ಲವೂ ಸ್ತಬ್ಧವಾಗಿದೆ.
ಹೊರಗೆ ಏನಾಗಿದೆ ಎಂಬುದರ ಸ್ಪಷ್ಟ ಮಾಹಿತಿಯಿಲ್ಲದೇ ಗೊಂದಲದಲ್ಲೇ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಶೋ ಮತ್ತೆ ಹೊಸದಾಗಿ ಆರಂಭವಾಗುತ್ತದಾ ಎಂದು ಕಾದುನೋಡಬೇಕಿದೆ.