Publish Date: Wed, 24 Nov 2021 (11:10 IST)
Updated Date: Wed, 24 Nov 2021 (11:14 IST)
ಕನ್ನಡದ ಹಿರಿಯ ನಟ ಅಂಬರೀಷ್ ಅವರು 2018ರ ನವೆಂಬರ್ 24ರಂದು ನಿಧನರಾದರು. ಅವರನ್ನು ಕಳೆದುಕೊಂಡು ಮೂರು ವರ್ಷ ಕಳೆದಿದೆ.
ಇಂದು ಅಂಬಿ ಅವರ ಪುಣ್ಯಸ್ಮರಣೆ. ಅಂಬಿ ಇಲ್ಲದೆ ಮೂರು ವರ್ಷ ಕಳೆದು ಹೋಗಿದೆ. ಅವರನ್ನು ಕಳೆದುಕೊಂಡ ನೋವು ಇನ್ನೂ ಕಡಿಮೆ ಆಗಿಲ್ಲ. ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅಂಬರೀಷ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಂಬರೀಷ್ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಲಿದ್ದಾರೆ.
ನಾಗರಹಾವು (1972) ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅಂಬರೀಷ್. ಹೀರೋ ಆಗಿ, ಖಳ ನಟನಾಗಿ ಮತ್ತು ಪೋಷಕ ಪಾತ್ರದ ಮೂಲಕ ಗುರುತಿಸಿಕೊಂಡರು. ರೆಬೆಲ್ ಸ್ಟಾರ್, ಮಂಡ್ಯದ ಗಂಡು ಎಂಬಿತ್ಯಾದಿ ಹೆಸರುಗಳ ಮೂಲಕ ಗುರುತಿಸಿಕೊಂಡರು ಅವರು. ನವೆಂಬರ್ 24ರಂದು ಅಂಬರೀಷ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರನ್ನು ಕಳೆದುಕೊಂಡಿದ್ದ ದಿನ ಇಡೀ ಕನ್ನಡ ಚಿತ್ರರಂಗ ದುಃಖದಲ್ಲಿ ಮುಳುಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆ ಸುದೀಪ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು. ಅಂಬರೀಷ್ ಅವರನ್ನು ಇಂದು ನೆನಪು ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ.