Publish Date: Sat, 15 Jun 2024 (10:56 IST)
Updated Date: Sat, 15 Jun 2024 (11:00 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ಸ್ಯಾಂಡಲ್ ವುಡ್ ನಟ ದರ್ಶನ್ ಬಗ್ಗೆ ಈಗ ಒಬ್ಬೊಬ್ಬರೇ ಚಿತ್ರತಾರೆಯರು ತಮ್ಮ ಧ್ವನಿ ಎತ್ತಲು ಶುರು ಮಾಡಿದ್ದಾರೆ.
ನಟಿ ರಮ್ಯಾ ನೇರವಾಗಿ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದಿದ್ದರು. ಅಲ್ಲದೆ, ದರ್ಶನ್ ಪ್ರಕರಣದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿರುವ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದರು. ನ್ಯಾಯದ ಮುಂದೆ ಎಲ್ಲರೂ ಒಂದೇ ಎಂದಿದ್ದರು.
ಅವರ ಜೊತೆಗೆ ನವರಸನಾಯಕ ಜಗ್ಗೇಶ್ ಕೂಡಾ ಕೊಲ್ಲವುದೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಹಿತವಚನದ ಸಾಲೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಅಪ್ಪಟ ಕನ್ನಡ ನಟಿ ಅದಿತಿ ಪ್ರಭುದೇವ ಸರದಿ. ಅದಿತಿ ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈಗ ದರ್ಶನ್ ಪ್ರಕರಣದ ಕುರಿತು ಪರೋಕ್ಷವಾಗಿ ಪೋಸ್ಟ್ ಮಾಡಿದ್ದಾರೆ.
ಸಂಪತ್ತು ನಷ್ಟವಾದರೆ ಅದರಿಂದ ಏನೂ ಕಳೆದುಕೊಳ್ಳಲ್ಲ. ಆರೋಗ್ಯ ಕಳೆದುಕೊಂಡರೆ ಏನೋ ಒಂದನ್ನು ಕಳೆದುಕೊಳ್ಳುತ್ತೀರಿ. ಆದರೆ ವ್ಯಕ್ತಿತ್ವವನ್ನೇ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಎಂದು ಆಂಗ್ಲ ಭಾಷೆಯ ನುಡಿಯೊಂದನ್ನು ಪ್ರಕಟಿಸಿ ದಯಾಮಯರಾಗಿರಿ ಎಂದು ಕಿವಿ ಮಾತು ಹೇಳಿದ್ದಾರೆ.