ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಣೆ ಪ್ರಕರಣ ಸಂಬಂಧ ಬೆಂಗಳೂರಿನ ನ್ಯಾಯಾಲಯವು ಕನ್ನಡ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ. ನ್ಯಾಯಮೂರ್ತಿ ವಿಶ್ವನಾಥ್ ಸಿ. ಗೌಡರ್ ಅಧ್ಯಕ್ಷತೆಯ ಆರ್ಥಿಕ ಅಪರಾಧ ನ್ಯಾಯಾಲಯವು ಶುಕ್ರವಾರ ಈ ಆದೇಶವನ್ನು ಹೊರಡಿಸಿದೆ.
ಮಾಣಿಕ್ಯ ಮತ್ತು ಪಟಾಕಿಯಂತಹ ಕನ್ನಡ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ರನ್ಯಾ ಅವರನ್ನು ಮಾರ್ಚ್3 ರಂದು ದುಬೈನಿಂದ ಹಿಂದಿರುಗಿದ ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿತ್ತು.
ರನ್ಯಾ ಅವರು ದೇಶಕ್ಕೆ ಕಳ್ಳಸಾಗಣೆ ಮಾಡಲು ಉದ್ದೇಶಿಸಿದ್ದ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಮಾರ್ಚ್ 4 ರಂದು, ರನ್ಯಾ ರಾವ್ ಅವರನ್ನು ಆರ್ಥಿಕ ಅಪರಾಧಗಳಿಗಾಗಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಮಾರ್ಚ್ 18 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅವರನ್ನು ಕಸ್ಟಡಿಗೆ ವರ್ಗಾಯಿಸುವ ಮೊದಲು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವಿಚಾರಣೆಯ ಸಮಯದಲ್ಲಿ, ರನ್ಯಾ ತನ್ನ ದುಬೈ ಪ್ರವಾಸವು ವ್ಯಾಪಾರ ಉದ್ದೇಶಗಳಿಗಾಗಿ ಎಂದು ಹೇಳಿಕೊಂಡಿದ್ದಾಳೆ ಎಂದು ವರದಿಯಾಗಿದೆ, ಆದರೆ ಅಧಿಕಾರಿಗಳು ಅವರ ಭೇಟಿಯು ಅಕ್ರಮ ಚಿನ್ನ ಆಮದು ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣದಲ್ಲಿ ರನ್ಯಾ ರಾವ್ ಅವರು ಕಸ್ಟಡಿಯಲ್ಲಿರುವ ಫೋಟೋ ವೈರಲ್ ಆಗಿದೆ. ಅದರಲ್ಲಿ ನಟಿಯ ಕಣ್ಣು ಸುತ್ತಾ ಕಪ್ಪಾಗಿದ್ದು, ಮುಖ ಊದಿಕೊಂಡ ರೀತಿಯಲ್ಲಿದೆ. ವಿಮಾನ ನಿಲ್ದಾಣದಲ್ಲಿ ಬಂಧನದ ಸಮಯದಲ್ಲಿ ಅಥವಾ ನಂತರ ನಟಿಯ ಮೇಲೆ ಹಲ್ಲೆ ನಡೆದಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.