Publish Date: Mon, 10 Jan 2022 (17:59 IST)
Updated Date: Mon, 10 Jan 2022 (17:04 IST)
ವಾರಾಂತ್ಯದ ಕರ್ಫ್ಯೂ ಜಾರಿ ಇರುವ ನಡುವೆಯೂ ಭಾನುವಾರ ನಗರದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಓಡಾಡುತ್ತಿದ್ದವರಿಗೆ ಸಂಚಾರಕ್ಕೆ ಕಾರಣಗಳನ್ನು ಕೇಳುವ
ನೆಪದಲ್ಲಿ ಪೊಲೀಸರು, ಈ ಹಿಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳ ದಂಡ ವಸೂಲಿಗೆ ಇಳಿದಿದ್ದು ಕಂಡು ಬಂದಿತು.
ವಾರಾಂತ್ಯದ ಕರ್ಫ್ಯೂ ಜಾರಿ ಇರುವುದರಿಂದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕಾರಣಕ್ಕೂ ಜನರು ಸಂಚರಿಸಲು ಅವಕಾಶವಿಲ್ಲ. ಆದರೂ ಕೆಲವು ಜನರು ಅನಿವಾರ್ಯ ಕಾರಣಗಳಿಂದ ಸಂಚರಿಸುತ್ತಿದ್ದರು. ಇದನ್ನು ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು, ವಾಹನಗಳನ್ನು ನಿಲ್ಲಿಸುವಂತೆ ಅಡ್ಡಗಟ್ಟುತ್ತಿದ್ದರು. ಯಾವ ಕಾರಣಕ್ಕಾಗಿ ಮತ್ತು ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದರು.
ಇದಾದ ನಂತರ ಪೊಲೀಸರು, ಸವಾರರನ್ನು ಬಿಟ್ಟು ಕಳುಹಿಸಬೇಕು. ಆದರೆ, ಸಂಬಂಧಪಟ್ಟ ವಾಹನವು ಈ ಹಿಂದೆ ಯಾವುದಾದರೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳಿವೆಯೇ ಎಂದು ಪರಿಶೀಲಿಸುತ್ತಿದ್ದರು. ಒಂದು ವೇಳೆ ಯಾವುದಾದರೂ ಪ್ರಕರಣಗಳಲ್ಲಿ ದಂಡ ಪಾವತಿಸದೆ, ಬಾಕಿ ಉಳಿಸಿಕೊಂಡಿದ್ದರೆ, ಕೂಡಲೇ ದಂಡ ಪಾವತಿಸಿ ವಾಹನಗಳನ್ನು ಬಿಡಿಸಿಕೊಂಡು ಹೋಗುವಂತೆ ಸೂಚಿಸುತ್ತಿದ್ದರು. ದಂಡ ಪಾವತಿಸದಿದ್ದರೆ, ವಾಹನಗಳನ್ನು ಬಿಡಲು ಸತಾಸುತ್ತಿದ್ದರು ಎಂದು ಸವಾರರೊಬ್ಬರು ಆರೋಪ ಮಾಡಿದ್ದಾರೆ.
ರಾಜಾಜಿನಗರದಿಂದ ನೃಪತುಂಗ ರಸ್ತೆಯಲ್ಲಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿದ್ದೆ.