Publish Date: Tue, 10 Aug 2021 (12:10 IST)
Updated Date: Tue, 10 Aug 2021 (12:16 IST)
ಲಂಡನ್(ಆ.10): ಪಿಎನ್ಬಿ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಗಡಿಪಾರು ಭೀತಿ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್ ಮೋದಿಗೆ, ಈ ಆದೇಶದ ವಿರುದ್ಧ ಖಿನ್ನತೆ ಮತ್ತು ಆತ್ಮಹತ್ಯೆ ಅಪಾಯದ ಅಂಶಗಳಡಿ ಮೇಲ್ಮನವಿ ಸಲ್ಲಿಸಲು ಲಂಡನ್ನ ಹೈಕೋರ್ಟ್ ಅನುಮತಿ ನೀಡಿದೆ.
ಒಂದು ವೇಳೆ ಈ ಮೇಲ್ಮನವಿಯಲ್ಲಿ ನೀಮೋ ವಾದ ಅಂಗೀಕಾರಗೊಂಡರೆ, ಬ್ರಿಟನ್ ಸರ್ಕಾರ, ನೀಮೋನನ್ನು ಭಾರತಕ್ಕೆ ಗಡಿಪಾರು ಮಾಡಲು ನಿರಾಕರಿಸಬಹುದಾಗಿರುತ್ತದೆ.
ಪ್ರಕರಣ ಸಂಬಂಧ ಈಗಾಗಲೇ ನೀಮೋ ಖಿನ್ನತೆಗೆ ಒಳಗಾಗಿದ್ದಾರೆ. ಅಲ್ಲದೆ ಗಡಿಪಾರು ಮಾಡಿದರೆ ನೀಮೋ ಅವರನ್ನು ಇಡಲಾಗುವ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ. ಹೀಗಾಗಿ ಗಡಿಪಾರಿಗೆ ಅವಕಾಶ ಕೊಡಬಾರದು ಎಂದು ನೀಮೋ ಪರ ವಕೀಲರು ವಾದಿಸಿದ್ದರು. ಇದನ್ನು ಆಲಿಸಿದ ನ್ಯಾ. ಮಾರ್ಟಿನ್ ಚಾಂಬರ್ಲೇನ್, ಎರಡೂ ಅಂಶಗಳು ವಾದಕ್ಕೆ ಅರ್ಹವಾಗಿವೆ. ಜೊತೆಗೆ ನೀಮೋ ಅವರನ್ನು ಆತ್ಮಹತ್ಯೆಯಿಂದ ತಡೆಯುವಂಥ ವ್ಯವಸ್ಥೆ ಇದೆಯೇ ಇಲ್ಲವೇ ಎಂಬ ಅಂಶ ಕೂಡಾ ವಾದದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಗಡಿಪಾರು ಪರ ತೀರ್ಪು ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದರು.