Publish Date: Tue, 07 Dec 2021 (20:20 IST)
Updated Date: Tue, 07 Dec 2021 (20:24 IST)
ಬೆಂಗಳೂರು: ವಿಚಾರಣೆ ನೆಪದಲ್ಲಿ ಯುವಕನ ಗಡ್ಡ ಕತ್ತರಿಸಿ ಮೂತ್ರ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಪಿಎಸ್ಸೈ ಹರೀಶ್ ಎಂಬವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಿಎಸ್ಸೈ ಹರೀಶ್ ಅವರನ್ನು ಅಮಾನತುಗೊಳಿಸಿ, ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ನೆರೆ ಮನೆಯವರೊಂದಿಗೆ ಜಗಳವಾಡಿದ ಸಂಬಂಧ ಪಾದರಾಯನಪುರ ನಿವಾಸಿ ತೌಸಿಫ್ ಎಂಬಾತನನ್ನು ಬ್ಯಾಟರಾಯನಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರೀಶ್ ರಾತ್ರಿ ವಶಕ್ಕೆ ಪಡೆದಿದ್ದರು. ಬಳಿಕ ಆತನನ್ನು ಠಾಣೆಗೆ ಕರೆತಂದು ಗಡ್ಡ ಕತ್ತರಿಸಿ, ನೀರು ಕೇಳಿದಕ್ಕೆ ಮೂತ್ರ ಕುಡಿಸಿರುವುದಾಗಿ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಪೋಷಕರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯ ಈ ಘಟನೆ ಸಂಬಂಧ ಪಿಎಸ್ಸೈ ಹರೀಶ್ರನ್ನು ವಿಚಾರಣೆ ನಡೆಸಿ ಡಿಸಿಪಿಗೆ ವರದಿ ಸಲ್ಲಿಸಿದ್ದರು. ವರದಿ ಬೆನ್ನಲೆ, ಹರೀಶ್ ರನ್ನು ಅಮಾನತು ಮಾಡಲಾಗಿದೆ.