Publish Date: Wed, 03 Jul 2024 (09:54 IST)
Updated Date: Wed, 03 Jul 2024 (10:09 IST)
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಡೆಂಗ್ಯೂ ಜ್ವರದ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಮಳೆ ಬಂದಾಗಿನಿಂದ ಬೆಂಗಳೂರಿನಲ್ಲಿ ಪ್ರತೀ ಗಂಟೆಗೆ ಇಬ್ಬರಿಗೆ ಎಂಬಂತೆ ಡೆಂಗ್ಯೂ ತಗುಲುತ್ತಿದೆ. ಡೆಂಗ್ಯೂ ಜ್ವರ ಬಂದಾಗ ನಾವು ಹಾಲು ಸೇವನೆ ಮಾಡಬಹುದೇ ಎಂಬ ಅನುಮಾನ ಅನೇಕರಿಗಿರುತ್ತದೆ.
ಸೊಳ್ಳೆಗಳಿಂದ ಹರಡುವ ಜ್ವರಗಳಲ್ಲಿ ಡೆಂಗ್ಯೂ ಜ್ವರ ಕೂಡಾ ಒಂದಾಗಿದೆ. ಹೀಗಾಗಿ ಮಳೆಗಾಲದಲ್ಲೇ ಡೆಂಗ್ಯೂ ಜ್ವರ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಮಳೆಗಾಲದಲ್ಲಿ ಕೊಳಚೆ ನೀರು ನಿಲ್ಲದಂತೆ ಮತ್ತು ಅದರಿಂದ ಸೊಳ್ಳೆಗಳು ಹುಟ್ಟದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ಡೆಂಗ್ಯೂ ಜ್ವರ ಬಂದಾಗ ತೀವ್ರತರದ ಆಯಾಸ, ತಲೆನೋವು, ಮಾಂಸ ಖಂಡಗಳಲ್ಲಿ ನೋವು, ಗಂಟು ನೋವುಗಳು, ವಾಕರಿಕೆ ಬಂದಂತಾಗುವುದು ಕಂಡುಬರುತ್ತದೆ. ಇದರಿಂದಾಗಿ ಮೈಯಲ್ಲಿನ ಶಕ್ತಿ ಕುಂದಿದಂತಾಗಬಹುದು. ಹೀಗಾಗಿ ಸರಿಯಾದ ರೀತಿಯ ಆಹಾರ ಸೇವನೆ ಮಾಡುವುದು ಮುಖ್ಯ.
ಕೆಲವೊಂದು ಜ್ವರ ಬಂದಾಗ ಜೀರ್ಣಕ್ರಿಯೆಗೆ ಕಷ್ಟವಾಗುವಂತಹ ಆಹಾರ ಸೇವನೆ ಮಾಡದಿರುವುದು ಉತ್ತಮ ಎಂದು ತಜ್ಞರೇ ಹೇಳುತ್ತಾರೆ. ಹಾಲು ಸಾಕಷ್ಟು ಪೋಷಕಾಂಶವಿರುವ ಆಹಾರ. ಇದರಲ್ಲಿ ಕೊಬ್ಬಿನಂಶವೂ ಇರುತ್ತದೆ. ಶಕ್ತಿವರ್ಧಕವಾಗಿರುವುದರಿಂದ ಡೆಂಗ್ಯೂ ಜ್ವರ ಬಂದಾಗ ಹಾಲು ಸೇವನೆ ಮಾಡುವುದಕ್ಕೆ ತೊಂದರೆಯಿಲ್ಲ. ಆದರೆ ಹಾಲಿಗೆ ಒಂಚೂರು ಅರಶಿಣ ಸೇರಿಸಿಕೊಂಡು ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.