Publish Date: Sat, 21 Sep 2024 (08:58 IST)
Updated Date: Sat, 21 Sep 2024 (09:02 IST)
ತಿರುಪತಿ: ಹಿಂದೂ ದೇವಾಲಯಗಳ ನಿಯಂತ್ರಣ ಸರ್ಕಾರದ ಅಧೀನದಲ್ಲಿರದೇ ಇನ್ನು ಮುಂದೆ ಹಿಂದೂ ಸಮಾಜದ ಕೈಗೇ ಒಪ್ಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.
ತಿರುಪತಿ ತಿಮ್ಮಪ್ಪನ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ ಮಾಡುತ್ತಿದ್ದ ಆಘಾತಕಾರೀ ವಿಚಾರ ಬಹಿರಂಗವಾದ ಬಳಿಕ ವಿಎಚ್ ಪಿ ಇಂತಹದ್ದೊಂದು ಡಿಮ್ಯಾಂಡ್ ಮಾಡಿದೆ. ಕೇವಲ ವಿಶ್ವ ಹಿಂದೂ ಪರಿಷತ್ ಮಾತ್ರವಲ್ಲದೆ, ಹಲವು ಹಿಂದೂ ಕಾರ್ಯಕರ್ತರಿಂದಲೂ ಈ ಒತ್ತಾಯ ಕೇಳಿಬಂದಿದೆ.
ಬೇರೆ ಎಲ್ಲಾ ಧರ್ಮಗಳ ಪ್ರಾರ್ಥನಾ ಮಂದಿರಗಳು ಆಯಾ ಸಮಾಜದವರ ಅಧೀನದಲ್ಲೇ ಇರುವಾಗ ಹಿಂದೂ ದೇವಾಲಯಗಳಿಗೆ ಮಾತ್ರ ಸರ್ಕಾರದ ನಿಯಂತ್ರಣವೇಕೆ? ಸರ್ಕಾರದ ನಿಯಂತ್ರಣಗಳಿಂದಲೇ ಇಂತಹ ಎಡವಟ್ಟುಗಳು ನಡೆಯುತ್ತಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಈಗ ಸೋಷಿಯಲ್ ಮೀಡಿಯಾಗಳ ಮೂಲಕ ಆಕ್ರೋಶ ಹೊರಹಾಕಲು ಶುರು ಮಾಡಿದ್ದಾರೆ.
ಮೊದಲು ದೇಶದಲ್ಲಿರುವ ಎಲ್ಲಾ ಹಿಂದೂ ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣ ನಿಲ್ಲಬೇಕು. ಹಿಂದೂ ಸಮಾಜದವರೇ ಆಯಾ ದೇವಾಲಯಗಳ ಆಡಳಿತ ನೋಡಿಕೊಳ್ಳುವಂತಾಗಬೇಕು. ಆಗ ಮಾತ್ರ ಇಂತಹ ಪ್ರಮಾದಗಳು ಆಗದಂತೆ ನೋಡಿಕೊಳ್ಳಬಹುದು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.