Publish Date: Fri, 19 May 2017 (10:06 IST)
Updated Date: Fri, 19 May 2017 (10:08 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಆಯ್ಕೆ ನಡೆದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಅನುಭವಿ ಗಂಭೀರ್, ಉತ್ಸಾಹಿ ರಿಷಬ್ ಪಂತ್ ಗೆ ಕೈಕೊಟ್ಟಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಅದೀಗ ಹೆಚ್ಚಾಗಿದೆ. ಕನ್ನಡಿಗ ಮನೀಶ್ ಪಾಂಡೆ ಗಾಯಗೊಂಡು ತೆರವಾದ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಗೆ ಸ್ಥಾನ ನೀಡಿದ್ದಕ್ಕೆ ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಐಪಿಎಲ್ ನಲ್ಲಿ ಅಷ್ಟೆಲ್ಲಾ ಯಶಸ್ಸು ಸಾಧಿಸಿರುವ ಗೌತಮ್ ಗಂಭೀರ್ ಅಥವಾ ರಿಷಬ್ ಪಂತ್ ರನ್ನು ಆರಿಸುವುದು ಬಿಟ್ಟು, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕಾರ್ತಿಕ್ ಗೆ ಯಾಕೆ ಸ್ಥಾನ ಕೊಟ್ಟರು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
15 ಸದಸ್ಯರ ತಂಡವಲ್ಲದೆ, 5 ಆಟಗಾರರನ್ನು ಮೀಸಲು ಆಟಗಾರರಾಗಿ ಬಿಸಿಸಿಐ ಹೆಸರಿಸಿತ್ತು. ಅವರಲ್ಲಿ ದಿನೇಶ್ ಕಾರ್ತಿಕ್ ಅಲ್ಲದೆ ಸುರೇಶ್ ರೈನಾ, ರಿಷಬ್ ಪಂತ್ ರಂತಹ ಬ್ಯಾಟ್ಸ್ ಮನ್ ಗಳಿದ್ದರು. ಅವರನ್ನೆಲ್ಲಾ ಬಿಟ್ಟು ದಿನೇಶ್ ಗೆ ಪ್ರಾಶಸ್ತ್ಯ ನೀಡಿದ್ದಕ್ಕೆ ಟ್ವಿಟರಿಗರು ತಪರಾಕಿ ನೀಡುತ್ತಿದ್ದಾರೆ.
ಆದರೆ ಕಾರ್ತಿಕ್ ಕೂಡಾ ಸಾಮಾನ್ಯ ಆಟಗಾರರಲ್ಲ. ಈ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ದೇಶೀಯ ಕ್ರಿಕೆಟ್ ನಲ್ಲೂ ಹೆಚ್ಚು ರನ್ ಗಳಿಸಿದ್ದಾರೆ ಎಂದು ಬಿಸಿಸಿಐ ಸಮರ್ಥಿಸಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ