Publish Date: Tue, 16 Jan 2024 (09:40 IST)
Updated Date: Tue, 16 Jan 2024 (09:48 IST)
ಮುಂಬೈ: ಐಪಿಎಲ್ ನಲ್ಲಿ ಯಶಸ್ವೀ ನಾಯಕನೆಂಬ ಹಣೆಪಟ್ಟಿಯಿದ್ದರೂ ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕಿತ್ತು ಹಾಕಿದ್ದೇಕೆ ಎಂಬ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಉತ್ತರಿಸಿದ್ದಾರೆ.
ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕಿತ್ತು ಹಾಕಿ ಗುಜರಾತ್ ಟೈಟನ್ಸ್ ನಿಂದ ಟ್ರೇಡ್ ಮಾಡಿದ್ದ ಹಾರ್ದಿಕ್ ಪಾಂಡ್ಯಗೆ ತಂಡದ ನಾಯಕತ್ವ ನೀಡಲಾಯಿತು. ಇದು ಮುಂಬೈ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ರೋಹಿತ್ ಗರಿಷ್ಠ ಬಾರಿ ಐಪಿಎಲ್ ಗೆದ್ದ ನಾಯಕ. ಹಾಗಿದ್ದರೂ ಅವರನ್ನು ನಾಯಕತ್ವದಿಂದ ಹೊರಗಿಟ್ಟಿದ್ದಕ್ಕೆ ಹಲವಾರು ಫ್ಯಾನ್ಸ್ ಮುಂಬೈ ತಂಡವನ್ನೇ ಬಹಿಷ್ಕರಿಸುವುದಾಗಿ ಹೇಳಿದ್ದರು.
ಆದರೆ ಈ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ವಯಸ್ಸು ಚಾಲೆಂಜಿಂಗ್. ಪ್ರತೀ ತಂಡವೂ ಯುವ ಪ್ರತಿಭಾವಂತ ಆಟಗಾರರನ್ನು ಬೆಳೆಸಲು ಮತ್ತು ಅವರ ಮೇಲೆ ಹೂಡಿಕೆ ಮಾಡಲು ಬಯಸುತ್ತವೆ. ಇದನ್ನು ನಾನೂ ಎದುರಿಸಿದ್ದೇನೆ. ಆದರೆ ಅನುಭವಕ್ಕೆ ಸಾಟಿ ಮತ್ತೊಂದಿಲ್ಲ. ರೋಹಿತ್ ಗೆ ಅಪಾರ ಅನುಭವವಿದೆ ಮತ್ತು ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಹಾಗಿದ್ದರೂ ಫ್ರಾಂಚೈಸಿ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.