ಅಡಿಲೇಡ್: ಟಿ20 ವಿಶ್ವಕಪ್ ನಲ್ಲಿ ನಿನ್ನೆ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿತ್ತು. ಮಳೆಯಿಂದಾಗಿ ಓವರ್ ಕಡಿತಗೊಂಡಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತ್ತು.
ಈ ಗೆಲುವಿನ ನಿಜವಾದ ರೂವಾರಿಗಳು ಕೇವಲ ಆಟಗಾರರಲ್ಲ. ಟೀಂ ಇಂಡಿಯಾದ ಈ ಸಹಾಯಕ ಸಿಬ್ಬಂದಿಯ ಶ್ರಮವೂ ಆಟಗಾರರ ಯಶಸ್ಸಿಗೆ ಕಾರಣವಾಗಿದೆ.
ರಘು ಎಂಬ ಥ್ರೋ ಡೌನ್ ಸಿಬ್ಬಂದಿ ನಿನ್ನೆ ಮೈದಾನದ ಸುತ್ತ ಕೈಯಲ್ಲೊಂದು ಬ್ರಷ್ ಹಿಡಿದುಕೊಂಡು ಓಡಾಡುತ್ತಿದ್ದರು. ನಿನ್ನೆ ಮಳೆ ಬಂದ ಬಳಿಕ ಆಟಗಾರರಿಗೆ ಮೈದಾನದಲ್ಲಿ ಓಡಾಡುವುದು ಕಷ್ಟವಾಗಿತ್ತು. ಮೈದಾನ ಒದ್ದೆಯಾಗಿದ್ದರಿಂದ ಶೂ ಕೊಳೆಯಾಗಿ ಜಾರುವ ಪರಿಸ್ಥಿತಿಯಿತ್ತು. ಹೀಗಾಗಿ ರಘು ಎಂಬ ಈ ಸಹಾಯಕ ಸಿಬ್ಬಂದಿ ಬ್ರಷ್ ಹಿಡಿದುಕೊಂಡು ಪದೇ ಪದೇ ಆಟಗಾರರ ಶೂ ಕೊಳೆ ನಿವಾರಿಸಿ ಆಟಗಾರರು ಜಾರಿ ಬೀಳದಂತೆ ಎಚ್ಚರಿಕೆ ವಹಿಸುತ್ತಿದ್ದರು. ಸಹಾಯಕ ಸಿಬ್ಬಂದಿಯ ಈ ಶ್ರಮವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.