Publish Date: Mon, 25 Feb 2019 (08:55 IST)
Updated Date: Mon, 25 Feb 2019 (08:56 IST)
ವಿಶಾಖಪಟ್ಟಣ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಆಸೀಸ್ ಅಂತಿಮ ಓವರ್ ನಲ್ಲಿ ರೋಚಕವಾಗಿ 3 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಗೆಲುವಿಗೆ 127 ರನ್ ಗಳನ್ನು ಬೆನ್ನತ್ತಿದ್ದ ಆಸೀಸ್ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ 7 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಗ್ಲೆನ್ ಮ್ಯಾಕ್ಸ್ ವೆಲ್ 43 ಎಸೆತಗಳಲ್ಲಿ 56 ರನ್ ಗಳಿಸಿದರೆ, ಭಾರತದ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿದರು. ಈ ಪಂದ್ಯವನ್ನು ಭಾರತ ಗೆಲ್ಲುವ ಎಲ್ಲಾ ಅವಕಾಶವೂ ಇತ್ತು. ಆದರೆ ತವರಿನಲ್ಲಿ ಮೊದಲ ಪಂದ್ಯದಲ್ಲೇ ಸೋಲಲು ಈ ನಾಲ್ವರು ಆಟಗಾರರ ಪ್ರದರ್ಶನ ಕಾರಣವಾಯಿತು.
ರೋಹಿತ್ ಶರ್ಮಾ
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೆಎಲ್ ರಾಹುಲ್ ಜತೆಗೆ ಕೆಲ ಕಾಲ ಕ್ರೀಸ್ ನಲ್ಲಿದ್ದರೆ ಭಾರತ ಹೆಚ್ಚು ರನ್ ಪೇರಿಸಬಹುದಿತ್ತು. ಆದರೆ ರೋಹಿತ್ ಆರಂಭದಲ್ಲೇ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇದು ಭಾರತಕ್ಕೆ ದುಬಾರಿಯಾಯಿತು.
ಉಮೇಶ್ ಯಾದವ್
ಅಂತಿಮ ಓವರ್ ನಲ್ಲಿ ಆಸೀಸ್ ಗೆಲುವಿಗೆ 6 ಎಸೆತಗಳಲ್ಲಿ 14 ರನ್ ಬೇಕಾಗಿತ್ತು. ಇಂತಹ ಎಷ್ಟೋ ಸಂದರ್ಭದಲ್ಲಿ ಭಾರತ ಪಂದ್ಯ ಗೆದ್ದ ಉದಾಹರಣೆಯಿದೆ. ಆದರೆ ಉಮೇಶ್ ಯಾದವ್ ಅಂತಿಮ ಓವರ್ ನ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಬಿಟ್ಟುಕೊಟ್ಟು ಸೋಲಿಗೆ ಕಾರಣರಾದರು.
ದಿನೇಶ್ ಕಾರ್ತಿಕ್
ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬೇಕಿದ್ದ ಬ್ಯಾಟ್ಸ್ ಮನ್ ಕಾರ್ತಿಕ್. ಒಂದು ವೇಳೆ ಇವರು ನಿಂತು ಮತ್ತೊಂದು ತುದಿಯಲ್ಲಿದ್ದ ಧೋನಿಗೆ ಸಾಥ್ ನೀಡಿದ್ದರೆ ಮೊತ್ತ ಇನ್ನಷ್ಟು ಹೆಚ್ಚುತ್ತಿತ್ತು.
ರಿಷಬ್ ಪಂತ್
ಹೊಡೆ ಬಡಿಯ ಆಟಗಾರ ಟಿ20 ಗೆ ಸೂಕ್ತ ಎಂದೇ ಇವರನ್ನು ತಂಡಕ್ಕೆ ಆರಿಸಲಾಗಿತ್ತು. ಕೊನೆಯಲ್ಲಿ ಇವರ ನ್ಯಾಚುರಲ್ ಶೈಲಿಯ ಬ್ಯಾಟಿಂಗ್ ನಡೆಸಿದ್ದರೆ ಭಾರತದ ಮೊತ್ತ ಹೆಚ್ಚಾಗುತ್ತಿತ್ತು. ಆದರೆ ಇಲ್ಲದ ರನ್ ಕದಿಯಲು ಹೋಗಿ ರನೌಟ್ (5) ಆಗುವ ಮೂಲಕ ತಂಡದ ಕುಸಿತಕ್ಕೆ ಕಾರಣರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Mon, 25 Feb 2019 (08:55 IST)
Updated Date: Mon, 25 Feb 2019 (08:56 IST)