Publish Date: Mon, 10 May 2021 (09:02 IST)
Updated Date: Mon, 10 May 2021 (09:04 IST)
ಮುಂಬೈ: ಒಂದು ಕಾಲದಲ್ಲಿ ವಿಶ್ವ ವಿಖ್ಯಾತ ಸ್ಪಿನ್ನರ್ ಗಳನ್ನು ಕಂಡ ಟೀಂ ಇಂಡಿಯಾದಲ್ಲಿ ಈಗ ವೇಗಿಗಳದ್ದೇ ಕಾರುಬಾರು. ಹೊಸ ಹೊಸ ವೇಗಿಗಳು ತಂಡಕ್ಕೆ ಸೇರ್ಪಡೆಯಾಗುತ್ತಿದ್ದರೆ, ಸ್ಪಿನ್ನರ್ ಗಳ ಕೊರತೆ ಎದ್ದು ಕಾಣುತ್ತಿದೆ.
ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ಸರಣಿಗಳಿಂದ ಟೀಂ ಇಂಡಿಯಾಗೆ ಹೊಸದಾಗಿ ಕೆಲವು ವೇಗದ ಬೌಲರ್ ಗಳು ಸಿಕ್ಕರು. ಭಾರತ ತಂಡಕ್ಕೆ ಹೊಸದಾಗಿ ಬರುತ್ತಿರುವ ಬೌಲರ್ ಗಳು ಹೆಚ್ಚಾಗಿ ವೇಗದ ಬೌಲಿಂಗ್ ಮಾಡುವವರೇ ಆಗಿದ್ದಾರೆ. ಆದರೆ ಸ್ಪಿನ್ನರ್ ಗಳು ಇತ್ತೀಚೆಗೆ ಮಾಯವಾಗುತ್ತಿದ್ದಾರೆ.
ಇರುವ ಪ್ರತಿಭೆಗಳು ಕಳೆಗುಂದಿದ್ದಾರೆ. ಹೊಸದಾಗಿ ಜಾದೂ ಮಾಡುವ ಸ್ಪಿನ್ನರ್ ಗಳೇ ಬರುತ್ತಿಲ್ಲ. ಇದು ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯ ಕರೆಗಂಟೆಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡಾ ಈಗಾಗಲೇ ಹೇಳಿದ್ದಾರೆ. ಮುಂದೆ ಎರಡು ವಿಶ್ವಕಪ್ ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಪರಿಣಾಮಕಾರಿ ಸ್ಪಿನ್ ಬೌಲರ್ ನ್ನು ಕಂಡುಕೊಳ್ಳುವ ಅಗತ್ಯ ಹೆಚ್ಚಿದೆ ಎನ್ನುವುದು ಅವರ ಅಭಿಪ್ರಾಯ. ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಫಾರ್ಮ್ ಗೆ ಬಂದರೆ ಕೆಲವು ದಿನಗಳ ಮಟ್ಟಿಗೆ ಸಮಸ್ಯೆಯಿಲ್ಲ. ಆದರೆ ಅವರ ನಂತರ ಯಾರು ಎಂಬುದಕ್ಕೆ ಐಪಿಎಲ್, ದೇಶೀಯ ಕ್ರಿಕೆಟ್ ಮೂಲಕ ಹೊಸ ಪ್ರತಿಭೆಗಳನ್ನು ಹುಡುಕಾಡುವ ಜವಾಬ್ಧಾರಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನದ್ದಾಗಿದೆ.