Publish Date: Thu, 06 Jun 2024 (10:09 IST)
Updated Date: Thu, 06 Jun 2024 (10:12 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ 2024 ರ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆದ್ದ ಸಂಭ್ರಮದಲ್ಲೇ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಗಾಯ ಆತಂಕ ಮೂಡಿಸಿದೆ.
ರೋಹಿತ್ ಶರ್ಮಾ ಟಾಸ್ ಸಂದರ್ಭದಲ್ಲೇ ತಮಗೆ ಸ್ವಲ್ಪ ಕೈ ನೋವಿರುವುದಾಗಿ ಹೇಳಿಕೊಂಡಿದ್ದರು. ಹಾಗಿದ್ದರೂ ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಮಾಡಿದ ರೋಹಿತ್ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಆರಂಭಿಕರಾಗಿ ಕಣಕ್ಕಿಳಿದು ಅಜೇಯ ಅರ್ಧಶತಕವನ್ನೂ ಸಿಡಿಸಿದರು.
ಆದರೆ ಬಳಿಕ ರಿಟೈರ್ಡ ಹರ್ಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಕೈ ನೋವಿನ ಕಾರಣದಿಂದ ಅವರು ಅರ್ಧದಲ್ಲೇ ಪೆವಿಲಿಯನ್ ಗೆ ತೆರಳಿದರು. ರೋಹಿತ್ ಗಾಯ ಟೀಂ ಇಂಡಿಯಾ ಅಭಿಮಾನಿಗಳ ಚಿಂತೆಗೆ ಕಾರಣವಾಗಿತ್ತು.
ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಟಾಸ್ ಸಂದರ್ಭದಲ್ಲೇ ಹೇಳಿದ್ದೆ. ನನಗೆ ಸ್ವಲ್ಪ ಕೈ ನೋವಿದೆ. ಆದರೆ ಗಂಭೀರವಲ್ಲ ಎಂದುಕೊಳ್ಳುತ್ತೇನೆ. ಆದರೆ ಇದು ಒಂದು ಸಣ್ಣ ಗಾಯವಷ್ಟೇ ಎಂದಿದ್ದಾರೆ. ಇದು ಗಂಭೀರವಾಗದೇ ಇದ್ದರೆ ಸಾಕು ಎಂದು ಅಭಿಮಾನಿಗಳೂ ಪ್ರಾರ್ಥಿಸುವಂತಾಗಿದೆ.
ಮುಂದೆ ಪಾಕಿಸ್ತಾನ ವಿರುದ್ಧ ಭಾರತ ಮಹತ್ವದ ಪಂದ್ಯವಾಡಬೇಕಿದೆ. ಈ ಟಿ20 ವಿಶ್ವಕಪ್ ರೋಹಿತ್ ಪಾಲಿಗೆ ಕೊನೆಯ ಟಿ20 ವಿಶ್ವಕಪ್ ಎಂದೇ ಬಣ್ಣಿಸಲಾಗುತ್ತಿದೆ. ಹೀಗಾಗಿ ಈ ಬಾರಿ ಕಪ್ ಗೆಲ್ಲಬೇಕೆಂದರೆ ಹಿಟ್ ಮ್ಯಾನ್ ಫಿಟ್ ಆಗಿರುವುದು ಮುಖ್ಯ.