Publish Date: Tue, 24 Feb 2026 (17:35 IST)
Updated Date: Tue, 24 Feb 2026 (17:35 IST)
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದ ಮೊದಲ ದಿನವೇ ಕರ್ನಾಟಕದ ವಿರುದ್ಧ ಜಮ್ಮು ಕಾಶ್ಮೀರ ಅದ್ಭುತ ಬ್ಯಾಟಿಂಗ್ ನಡೆಸಿದೆ. ಇಂದಿನ ದಿನದಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 284 ರನ್ ಗಳಿಸಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭದಲ್ಲೇ ಖಮರಾನ್ ಇಕ್ಬಾಲ್ 6 ರನ್ ಗಳಿಸಿ ಔಟಾದರೂ ನಂತರ 2 ನೇ ವಿಕೆಟ್ ಗೆ ಯಾವೆರ್ ಹಸನ್ ಮತ್ತು ಶುಭಂ ಪುಂಡಿರ್ ಶತಕದ ಜೊತೆಯಾಟವಾಡಿದರು. ಈ ಪೈಕಿ ಹಸನ್ 88 ರನ್ ಗಳಿಸಿ ಔಟಾದರೆ ಶುಭಂ ಶತಕ ಸಿಡಿಸಿ ಮಿಂಚಿದರು. ಒಟ್ಟು 221 ಎಸೆತ ಎದುರಿಸಿದ ಅವರು 117 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಈ ನಡುವೆ ನಾಯಕ ಪರಾಸ್ 9 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿಯಾಗಬೇಕಾಯಿತು. ನಂತರ ಕ್ರೀಸ್ ಗೆ ಬಂದ ಅಬ್ದುಲ್ ಸಮದ್ 52 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂದಿನ ದಿನವಿಡೀ ಜಮ್ಮು ಬ್ಯಾಟಿಗರು ಅದ್ಭುತ ಪ್ರದರ್ಶನ ತೋರಿದ್ದಾರೆ. ಕರ್ನಾಟಕದ ಪರ ಪ್ರಸಿದ್ಧ ಕೃಷ್ಣ 2 ವಿಕೆಟ್ ಕಬಳಿಸಿ ಮಿಂಚಿದರು. ಉಳಿದ ಬೌಲರ್ ಗಳಿಗೆ ಇಂದು ವಿಕೆಟ್ ಸಿಗಲಿಲ್ಲ.