Publish Date: Sat, 04 Jan 2020 (11:59 IST)
Updated Date: Sat, 04 Jan 2020 (12:00 IST)
ಮುಂಬೈ: ಸುರಕ್ಷಿತ ಸ್ಥಿತಿಯಲ್ಲಿದ್ದು ಇನ್ನೇನು ಮೊದಲ ಇನಿಂಗ್ಸ್ ಮುನ್ನಡೆ ಕಂಡಿತು ಎನ್ನುವಾಗಲೇ ಕರ್ನಾಟಕ ತಂಡ ಜಾರಿ ಬಿದ್ದಿದೆ. ಮುಂಬೈ ವಿರುದ್ಧ ರಣಜಿ ಕ್ರಿಕೆಟ್ ಪಂದ್ಯದಲ್ಲಿ ದ್ವಿತೀಯ ದಿನದ ಭೋಜನ ವಿರಾಮದ ವೇಳೆಗೆ ಕರ್ನಾಟಕ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಸಂಕಷ್ಟದಲ್ಲಿದೆ.
ಮೊದಲ ಇನಿಂಗ್ಸ್ ನಲ್ಲಿ ಮುಂಬೈ 194 ಕ್ಕೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಆತ್ಮವಿಶ್ವಾಸದಿಂದಲೇ ಬೆನ್ನತ್ತಿದ ಕರ್ನಾಟಕ ನಿನ್ನೆಯ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿತ್ತು. ಆದರೆ ಇಂದು ಒಂದು ಹಂತದಲ್ಲಿ 129 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಇದ್ದಕ್ಕಿದ್ದಂತೆ ಕುಸಿತ ಕಂಡು 179 ರನ್ ಗಳಿಗೆ ಮತ್ತೆ ನಾಲ್ಕು ವಿಕೆಟ್ ಉದುರಿಸಿಕೊಂಡಿದೆ.
ಉತ್ತಮ ಆಟವಾಡುತ್ತಿದ್ದ ರವಿಕಾಂತ್ ಸಮರ್ಥ್ 86 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಗೋಪಾಲ್ 31 ರನ್ ಗಳಿಸಿದರೆ ನಾಯಕ ಕರುಣ್ ನಾಯರ್ ಶೂನ್ಯ ಸುತ್ತಿದ್ದು ದುಬಾರಿಯಾಯಿತು. ಇದೀಗ ವಿಕೆಟ್ ಕೀಪರ್ ಶರತ್ 13 ರನ್ ಮತ್ತು ವಿ ಕೌಶಿಕ್ 2 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮುಂಬೈ ಪರ ಶಶಾಂಕ್ ಅತರ್ಡೆ 4 ಮತ್ತು ಶಂಸ್ ಮುಲಾನಿ 3 ವಿಕೆಟ್ ಕಬಳಿಸಿದರು. ಕರ್ನಾಟಕ ಇನ್ನೂ 15 ರನ್ ಗಳ ಮೊದಲ ಇನಿಂಗ್ಸ್ ಹಿನ್ನಡೆಯಲ್ಲಿದೆ.