Publish Date: Wed, 20 Nov 2019 (09:24 IST)
Updated Date: Wed, 20 Nov 2019 (09:26 IST)
ಕೋಲ್ಕೊತ್ತಾ: ನವಂಬರ್ 22 ರಿಂದ ಈಡನ್ ಗಾರ್ಡನ್ ನಲ್ಲಿ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಜೋರಾಗಿದ್ದರೆ, ಇತ್ತ ‘ವಾಲ್’ ರಾಹುಲ್ ದ್ರಾವಿಡ್ ಇದೊಂದರಿಂದಲೇ ಟೆಸ್ಟ್ ಕ್ರಿಕೆಟ್ ಉದ್ದಾರವಾಗದು ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ನತ್ತ ಜನರನ್ನು ಆಕರ್ಷಿಸಲು ಹಗಲು ರಾತ್ರಿ ಟೆಸ್ಟ್ ಪಂದ್ಯ ಉತ್ತಮ ವೇದಿಕೆಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ದ್ರಾವಿಡ್ ಇದೊಂದೇ ಸಾಕಾಗದು ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್ ಉದ್ದಾರ ಮಾಡಲು ಇದು ಒಂದು ದಾರಿಯಾಗಬಹುದಷ್ಟೇ. ಟೆಸ್ಟ್ ಕ್ರಿಕೆಟ್ ಉದ್ದಾರ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ಪಿಂಕ್ ಬಾಲ್ ನಲ್ಲಿ ಡ್ಯೂ ಫ್ಯಾಕ್ಟರ್ ನಿಭಾಯಿಸಲು ಕಲಿಯಬೇಕು. ಹಾಗಿದ್ದರೆ ಮಾತ್ರ ಹೊನಲು ಬೆಳಕಿನ ಟೆಸ್ಟ್ ಯಶಸ್ವಿಯಾಗಲಿದೆ. ಅದಲ್ಲದೆ, ಮೈದಾನಕ್ಕೆ ಬರುವ ವೀಕ್ಷಕರಿಗೆ ಮೂಲಭೂತ ಸೌಕರ್ಯಗಳಾದ ನೀರು, ಆಹಾರ, ಸೂಕ್ತ ಟಾಯ್ಲೆಟ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆಯನ್ನೂ ಸರಿಯಾಗಿ ಒದಗಿಸಬೇಕು. ಇತ್ತೀಚೆಗೆ ಸುಲಭವಾಗಿ ನೆಟ್ ಸೌಲಭ್ಯ ಸಿಗುತ್ತಿದೆ. ಟಿವಿಯಲ್ಲಿ ಎಚ್ ಡಿ ಕ್ವಾಲಿಟಿಯಲ್ಲಿ ಅತ್ಯುತ್ತಮವಾಗಿ ಟೆಸ್ಟ್ ಕ್ರಿಕೆಟ್ ನ ದೃಶ್ಯಾವಳಿ ನೋಡಬಹುದು. ಹೀಗಾಗಿ ಜನರಿಗೆ ಮೈದಾನಕ್ಕೇ ಬಂದು ಪಂದ್ಯ ನೋಡಬೇಕಾಗಿಲ್ಲ’ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.