Publish Date: Wed, 13 Jan 2021 (08:52 IST)
Updated Date: Wed, 13 Jan 2021 (08:55 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಬಹುತೇಕರು ಗಾಯಾಳುಗಳಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೆ ಸ್ವತಃ ರವಿಶಾಸ್ತ್ರಿಯೇ ನಿವೃತ್ತಿ ಹಿಂಪಡೆದು ಬ್ಯಾಟ್ ಹಿಡಿದು ಕಣಕ್ಕಿಳಿಯುತ್ತಾರಂತೆ!
ಭಾರತೀಯ ಕ್ರಿಕೆಟಿಗರ ಗಾಯಾಳುಗಳ ಲಿಸ್ಟ್ ಬೆಳೆಯುತ್ತಿರುವುದು ನೋಡಿ ನೆಟ್ಟಿಗರು ಹೀಗೆಂದು ಟ್ರೋಲ್ ಮಾಡಿದ್ದಾರೆ. ಟೀಂ ಇಂಡಿಯಾದ ಸದ್ಯದ ಅವಸ್ಥೆ ನೋಡಿದರೆ ಮುಂದಿನ ಪಂದ್ಯಕ್ಕೆ ರವಿಶಾಸ್ತ್ರಿ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರೇ ನಿವೃತ್ತಿ ಹಿಡಿದು ಕಣಕ್ಕಿಳಿಯಬೇಕಾದೀತು ಎಂದು ನೆಟ್ಟಿಗರು ಕುಹುಕವಾಡಿದ್ದಾರೆ. ಯಾಕೆಂದರೆ ಈಗಾಗಲೇ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಕೆಎಲ್ ರಾಹುಲ್ ಗಾಯಗೊಂಡು ತವರಿಗೆ ಮರಳಿದ್ದಾರೆ. ರವೀಂದ್ರ ಜಡೇಜಾ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಹನುಮ ವಿಹಾರಿಗೆ ಸ್ನಾಯು ಸೆಳೆತವಾಗಿದೆ. ಮಯಾಂಕ್ ಅಗರ್ವಾಲ್ ಕೈಗೆ ಗಾಯಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ಪಿತೃತ್ವ ರಜೆಯಲ್ಲಿದ್ದಾರೆ. ಇದೀಗ ಜಸ್ಪ್ರೀತ್ ಬುಮ್ರಾ ಕೂಡಾ ಗಾಯದ ಸಮಸ್ಯೆಯಿಂದ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ತಂಡದಲ್ಲಿ ಬಹುತೇಕರು ಗಾಯಾಳುಗಳಾಗಿದ್ದು, ಆಡುವ ಬಳಗಕ್ಕೆ ಆಟಗಾರರೇ ಇಲ್ಲ ಎಂಬಂತಾಗಿದೆ. ಇದೇ ಕಾರಣಕ್ಕೆ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.