ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಿಂದ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಅವರು ಆಡದೇ ಇದ್ದರೆ ಈ ಬೌಲರ್ ಗೆ ಅವಕಾಶ ಕೊಡುವುದೇ ಸೂಕ್ತ ಅಂತಿದ್ದಾರೆ ಫ್ಯಾನ್ಸ್.
ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವ ಎಲ್ಲಾ ಅವಕಾಶಗಳಿದ್ದೂ ಟೀಂ ಇಂಡಿಯಾ ಕೈ ಚೆಲ್ಲಿತು. ಈಗ ಎರಡನೇ ಪಂದ್ಯವನ್ನು ಗೆದ್ದು ಸರಣಿಗೆ ಮರಳುವ ಒತ್ತಡ ತಂಡದ ಮೇಲಿದೆ. ಅಷ್ಟರಲ್ಲೇ ಬುಮ್ರಾ ಫಿಟ್ನೆಸ್ ಚಿಂತೆಗೆ ಕಾರಣವಾಗಿದೆ. ಟೀಂ ಇಂಡಿಯಾದಲ್ಲಿ ಎಷ್ಟೇ ಬೌಲರ್ ಗಳಿದ್ದರೂ ಬುಮ್ರಾ ರೀತಿ ಯಾರೂ ಎದುರಾಳಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ.
ಹೀಗಾಗಿ ಅವರು ಗೈರಾದರೆ ಅವರ ಸ್ಥಾನಕ್ಕೆ ಒಬ್ಬ ಸಮರ್ಥ ಬೌಲರ್ ನನ್ನೇ ಆಯ್ಕೆ ಮಾಡಬೇಕು. ಆ ನಿಟ್ಟಿನಲ್ಲಿ ಅರ್ಷ್ ದೀಪ್ ಸಿಂಗ್ ಸೂಕ್ತ ಎನ್ನುತ್ತಿದ್ದಾರೆ ಫ್ಯಾನ್ಸ್. ಅರ್ಷ್ ದೀಪ್ ಸಿಂಗ್ ಟಿ20 ಕ್ರಿಕೆಟ್, ಏಕದಿನದಲ್ಲಿ ಆಡಿದ್ದರೂ ಟೆಸ್ಟ್ ಕ್ರಿಕೆಟ್ ನಲ್ಲಿ ಇದುವರೆಗೆ ಆಡಿಲ್ಲ. ಆದರೆ ಕಿರು ಮಾದರಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಟೆಸ್ಟ್ ಪಂದ್ಯದಲ್ಲೂ ಅವರನ್ನು ಆಡಿಸಬೇಕು ಎನ್ನುವುದು ಎಲ್ಲರ ಒತ್ತಾಯ.
ಯಾಕೆಂದರೆ ತಂಡದಲ್ಲಿ ಈಗಾಗಲೇ ಇರುವ ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಕಳೆದ ಪಂದ್ಯದಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಶ್ರಾರ್ದೂಲ್ ಠಾಕೂರ್ ಗೆ ಇನ್ನಷ್ಟು ಅವಕಾಶ ನೀಡಬೇಕಿತ್ತು ಎಂಬ ಆಕ್ಷೇಪ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಅರ್ಷ್ ದೀಪ್ ಆಡುವುದು ಬಹುತೇಕ ಖಚಿತ ಎನ್ನಬಹುದು.