Publish Date: Mon, 30 Dec 2024 (14:36 IST)
Updated Date: Mon, 30 Dec 2024 (14:39 IST)
ಮೆಲ್ಬೊರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸ್ವತಃ ತಾವೇ ವೈಫಲ್ಯಕ್ಕೊಳಗಾಗಿ ತಂಡದ ಬ್ಯಾಟಿಂಗ್ ಹಳಿ ತಪ್ಪಿದ್ದರೂ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಬೌಲಿಂಗ್ ನ್ನು ರೋಹಿತ್ ಶರ್ಮಾ ದೂಷಿಸಿದ್ದಾರೆ.
ಈ ಪಂದ್ಯದ ಸೋಲಿನ ಬಗ್ಗೆ ಕಾರಣಗಳನ್ನು ವಿವರಿಸಿದ ರೋಹಿತ್ ಶರ್ಮಾ ದ್ವಿತೀಯ ಇನಿಂಗ್ಸ್ ನಲ್ಲಿ ಆಸೀಸ್ ನ ಬಾಲಂಗೋಚಿ ಬ್ಯಾಟಿಗರ ವಿಕೆಟ್ ಪಡೆಯಲು ವಿಫಲವಾಗಿದ್ದೂ ಸೋಲಿಗೆ ಕಾರಣ ಎಂದಿದ್ದಾರೆ.
ನಾವು ಇಲ್ಲಿಗೆ ಏನು ಮಾಡಲು ಬಂದಿದ್ದೇವೋ ಅದು ಆಗದೇ ಇದ್ದಾಗ ನಿಜಕ್ಕೂ ಬೇಸರವಾಗುತ್ತದೆ. ತಂಡವಾಗಿ ನಾವು ಒಟ್ಟಿಗೇ ಗೆಲುವಿಗಾಗಿ ಹೋರಾಟ ಮಾಡಲು ವಿಫಲರಾದೆವು. ಆದರೆ ಆಸ್ಟ್ರೇಲಿಯಾ ಗೆಲುವಿಗಾಗಿ ಕಠಿಣ ಪರಿಶ್ರಮವಹಿಸಿತು ಎಂದು ರೋಹಿತ್ ಹೇಳಿದ್ದಾರೆ.
ಕೊನೆಯ ವಿಕೆಟ್ ಗೆ ಆಸ್ಟ್ರೇಲಿಯಾ ಬ್ಯಾಟಿಗರ ಜೊತೆಯಾಟ ತಡೆಯಲು ನಾವು ವಿಪಲರಾದೆವು. ಬಹುಶಃ ಅದುವೇ ನಮಗೆ ಮುಳುವಾಯಿತು ಎಂದು ರೋಹಿತ್ ಹೇಳಿದ್ದಾರೆ. ಇನ್ನು, ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಬಗ್ಗೆ ರೋಹಿತ್ ಹೊಗಳಿದ್ದಾರೆ. ಮುಂದಿನ ದಿನಗಳಲ್ಲಿ ತಮಗೆ ಸಿಕ್ಕುವ ಅವಕಾಶವನ್ನು ಬಳಸಿಕೊಂಡು ನಿತೀಶ್ ಇನ್ನಷ್ಟು ಬೆಳೆಯಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾಗೂ ಹೊಗಳಿಕೆ ನೀಡಿದ್ದಾರೆ. ಜೊತೆಗೆ ಬುಮ್ರಾಗೆ ದುರದೃಷ್ಟವಶಾತ್ ಇನ್ನೊಂದು ತುದಿಯಿಂದ ಬೌಲಿಂಗ್ ನಲ್ಲಿ ಸಾಥ್ ಸಿಗುತ್ತಿಲ್ಲ ಎಂದೂ ಹೇಳಿದ್ದಾರೆ.