ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಒತ್ತಡದಲ್ಲಿದ್ದರೂ ಉತ್ತಮ ಆಟಗಾರರನ್ನು ಹೊರಗಿಟ್ಟು ತನ್ನಿಷ್ಟದ ಹರ್ಷಿತ್ ರಾಣಾಗೆ ತಂಡದಲ್ಲಿ ಸ್ಥಾನ ಉಳಿಸಿಕೊಟ್ಟಿದ್ದಕ್ಕೆ ಗೌತಮ್ ಗಂಭೀರ್ ಫುಲ್ ಟ್ರೋಲ್ ಆಗಿದ್ದಾರೆ.
ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ಕೋಚ್ ಆಗಿದ್ದಾಗ ಅವರ ಗರಡಿಯಲ್ಲೇ ಪಳಗಿದ ವೇಗಿ ಹರ್ಷಿತ್ ರಾಣಾ. ಇದೀಗ ಗಂಭೀರ್ ಟೀಂ ಇಂಡಿಯಾ ಕೋಚ್ ಆದ ಮೇಲೆ ಹರ್ಷಿತ್ ರಾಣಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೇ ಇದ್ದರೂ ಮೂರೂ ಮಾದರಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ.
ಅದರಲ್ಲೂ ಮೊಹಮ್ಮದ್ ಶಮಿ, ಅರ್ಷ್ ದೀಪ್ ಸಿಂಗ್ ರಂತಹ ಪ್ರತಿಭಾವಂತರನ್ನು ಆಚೆ ಹಾಕಿ ಹರ್ಷಿತ್ ರಾಣಾಗೆ ಎಷ್ಟೇ ವೈಫಲ್ಯಕ್ಕೊಳಗಾದರೂ ಪದೇ ಪದೇ ಸ್ಥಾನ ನೀಡಲಾಗುತ್ತಿದೆ. ಹೀಗಾಗಿಯೇ ಹರ್ಷಿತ್ ರನ್ನು ಗಂಭೀರ್ ಅವರ ದತ್ತು ಪುತ್ರ ಎಂದೇ ಈಗ ಎಲ್ಲರೂ ಟೀಕೆ ಮಾಡುತ್ತಿದ್ದಾರೆ.
ಇದೀಗ ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಒತ್ತಡದಲ್ಲಿದೆ. ಹೀಗಿರುವಾಗ ತಂಡಕ್ಕೆ ಒಬ್ಬ ಸ್ಪಷಲಿಸ್ಟ್ ಸ್ಪಿನ್ನರ್ ನ ಸೇರ್ಪಡೆಗೊಳಿಸಬೇಕೆಂದು ಕುಲದೀಪ್ ಯಾದವ್ ಗೆ ಸ್ಥಾನ ನೀಡಲಾಗಿದೆ. ಅದು ತಪ್ಪಲ್ಲ. ಆದರೆ ಅದಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು ನಿತೀಶ್ ಕುಮಾರ್ ರೆಡ್ಡಿ ಮತ್ತು ಅರ್ಷ್ ದೀಪ್ ಸಿಂಗ್ ರನ್ನು ತಂಡದಿಂದ ಕಿತ್ತು ಹಾಕಲಾಗಿದೆ. ಈ ಮೂಲಕ ಹರ್ಷಿತ್ ಸ್ಥಾನಕ್ಕೆ ಯಾವುದೇ ತೊಂದರೆಯಾಗದಂತೆ ಗಂಭೀರ್ ನೋಡಿಕೊಂಡಿದ್ದಾರೆ.
ಈ ಬಗ್ಗೆ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಎಲ್ಲರೂ ತಾತ್ಕಾಲಿಕ. ಆದರೆ ಹರ್ಷಿತ್ ರಾಣಾ ಮಾತ್ರ ಪರ್ಮನೆಂಟ್ ಸದಸ್ಯ. ಪ್ರದರ್ಶನ ನೀಡಲಿ, ನೀಡದೇ ಇರಲಿ ಅವರು ಮಾತ್ರ ಖಾಯಂ ಎಂದು ಟೀಕಿಸಿದ್ದಾರೆ. ಏನೂ ಕಿಸಿಯಲು ಸಾಧ್ಯವಾಗದ ಹರ್ಷಿತ್ ರಾಣಾಗಾಗಿ ಬಿಳಿ ಚೆಂಡಿನ ಅತ್ಯುತ್ತಮ ಕ್ರಿಕೆಟಿಗ ಅರ್ಷ್ ದೀಪ್ ಸಿಂಗ್ ರನ್ನು ಕಿತ್ತು ಹಾಕಿದ್ದೀರಾ? ಎಲ್ಲರೂ ಫೇಲ್ ಆಗುವಾಗ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುವ ನಿತೀಶ್ ಕುಮಾರ್ ರೆಡ್ಡಿಯನ್ನು ಕಿತ್ತು ಹಾಕಲು ಹೇಗೆ ಸಾಧ್ಯವಾಯಿತು? ನಿಮಗೆ ನಿಜವಾಗಿಯೂ ಈ ಪಂದ್ಯ ಗೆಲ್ಲಬೇಕು ಎಂಬ ಆಸೆಯಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.