Publish Date: Wed, 27 Nov 2024 (11:55 IST)
Updated Date: Wed, 27 Nov 2024 (11:59 IST)
ಬೆಂಗಳೂರು: ಈ ಬಾರಿ ಐಪಿಎಲ್ ಹರಾಜಿನಲ್ಲಿ ಒಳ್ಳೆಯ ಆಟಗಾರರನ್ನು ಖರೀದಿಸದ ಫ್ರಾಂಚೈಸಿ ವಿರುದ್ಧ ಸಿಟ್ಟಿಗೆದ್ದಿರುವ ಆರ್ ಸಿಬಿ ಫ್ಯಾನ್ಸ್ ಸಂಘವೊಂದು ತಂಡವನ್ನೇ ಖರೀದಿಸಲು ಕರೆ ನೀಡಿದೆ.
ಆರ್ ಸಿಬಿ ತಂಡವನ್ನು ಖರೀದಿಸೋಣ ನೀವೆಲ್ಲಾ ದೇಣಿಗೆ ನೀಡಿದರೆ ಸಾಕು ಎಂದು ಆಲ್ ಇಂಡಿಯಾ ಆರ್ ಸಿಬಿ ಫ್ಯಾನ್ಸ್ ಅಸೋಸಿಯೇಷನ್ ಮಳವಳ್ಳಿ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪ್ರಕಟಿಸಿರುವ ಪೋಸ್ಟ್ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಐಪಿಎಲ್ ನಲ್ಲಿ ಅತ್ಯಂತ ಪ್ರಾಮಾಣಿಕ ಹಿಂಬಾಲಕರನ್ನು ಹೊಂದಿರುವ ತಂಡ ಯಾವುದು ಎಂದು ಕೇಳಿದರೆ ಥಟ್ಟನೇ ಎಲ್ಲರೂ ಆರ್ ಸಿಬಿ ಹೆಸರು ಹೇಳುತ್ತಾರೆ. ಆರ್ ಸಿಬಿ ಅಭಿಮಾನಿಗಳು ತಮ್ಮ ತಂಡವನ್ನು ಅಷ್ಟರ ಮಟ್ಟಿಗೆ ಇಷ್ಟಪಡುತ್ತಾರೆ. ಸೋಲಲಿ, ಗೆಲ್ಲಲಿ ಯಾವತ್ತೂ ತಮ್ಮ ತಂಡವನ್ನು ಬಿಟ್ಟುಕೊಡೋದೇ ಇಲ್ಲ.
ಆದರೆ ಈ ಐಪಿಎಲ್ ಹರಾಜಿನಲ್ಲಿ ಕೆಎಲ್ ರಾಹುಲ್ ರನ್ನು ಖರೀದಿಸದೇ ಇರುವುದು, ಮೊಹಮ್ಮದ್ ಸಿರಾಜ್ ರನ್ನು ಕೈ ಬಿಟ್ಟಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ನಾವೇ ಆರ್ ಸಿಬಿ ತಂಡವನ್ನು ಖರೀದಿಸೋಣ ಎಂದು ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ. ಈ ವೈರಲ್ ಪೋಸ್ಟ್ ನಲ್ಲಿ ಪ್ರತಿಯೊಬ್ಬ ಅಭಿಮಾನಿಯೂ 10 ಸಾವಿರ ದೇಣಿಗೆ ಕೊಟ್ಟರೆ ಸಾಕು. 1000 ಕೋಟಿ ರೂ.ಗೆ ತಂಡವನ್ನೇ ಖರೀದಿಸೋಣ. ಬಳಿಕ ತಂಡವೂ ನಮ್ಮದೇ, ಕಪ್ ಕೂಡಾ ನಮ್ಮದೇ ಎಂದು ಬರೆಯಲಾಗಿದೆ. ಈ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.