Publish Date: Thu, 09 May 2024 (13:24 IST)
Updated Date: Thu, 09 May 2024 (13:27 IST)
ಲಕ್ನೋ: ಸನ್ ರೈಸರ್ಸ್ ಹೈದರಾಬಾದ್ ಪಂದ್ಯದ ವಿರುದ್ಧ ಲಕ್ನೋ ಸೋಲಿನ ಬಳಿಕ ನಾಯಕ ಕೆಎಲ್ ರಾಹುಲ್ ಮತ್ತು ಮಾಲಿಕ ಸಂಜೀವ್ ಗೊಯೆಂಕಾ ಮಧ್ಯೆ ನಡೆದ ವಾಗ್ವಾದ ಅಭಿಮಾನಿಗಳನ್ನು ಕೆರಳಿಸಿದೆ.
ಅಪ್ಪಟ ಕನ್ನಡಿಗ ಪ್ರತಿಭೆ ಕೆಎಲ್ ರಾಹುಲ್ ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವವರು. ಭಾರತದ ಪರ ಎಷ್ಟೋ ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ. ಲಕ್ನೋ ತಂಡವನ್ನೂ ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿಯಿದೆ. ಹಾಗಿದ್ದರೂ ಹೈದರಾಬಾದ್ ವಿರುದ್ಧ ಪಂದ್ಯ ಸೋತಾಗ ಸಂಜೀವ್ ಗೊಯೆಂಕಾ ನೂರಾರು ಕ್ಯಾಮರಾಗಳ ಮುಂದೆ, ಪಬ್ಲಿಕ್ ಆಗಿ ಕೆಎಲ್ ರಾಹುಲ್ ಜೊತೆ ಜಗಳ ಮಾಡಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಏನೇ ವೈಮನಸ್ಯಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಮಾಡಬಹುದಿತ್ತು. ಅದು ಬಿಟ್ಟು ಕೆಎಲ್ ರಾಹುಲ್ ಸಾಧನೆಗೂ ಬೆಲೆ ಕೊಡದೇ ಸಾರ್ವಜನಿಕವಾಗಿ ಅವಮಾನ ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿ ಹೋಗಿ ಕತ್ತೆ ಚಾಕರಿ ಮಾಡಿದ್ದು ಸಾಕು, ಆರ್ ಸಿಬಿಗೆ ವಾಪಸ್ ಬನ್ನಿ ಎಂದು ರಾಹುಲ್ ಗೆ ಅಭಿಮಾನಿಗಳು ಆಗ್ರಹಿಸಿದ್ದಾರೆ.
ರಾಹುಲ್ ನಿಮ್ಮಂತಹ ಸಭ್ಯರನ್ನು ತಂಡದಲ್ಲಿಟ್ಟುಕೊಳ್ಳುವ ಯೋಗ್ಯತೆ ಸಂಜೀವ್ ಗೊಯೆಂಕಾಗಿಲ್ಲ. ಮುಂದಿನ ವರ್ಷ ಹರಾಜಿನ ವೇಳೆ ಲಕ್ನೋ ತಂಡ ಬಿಟ್ಟು ಮತ್ತೆ ಆರ್ ಸಿಬಿಗೆ ಬನ್ನಿ. ಇಲ್ಲಿ ನಿಮ್ಮ ಅವಶ್ಯಕತೆ ತುಂಬಾ ಇದೆ. ಇಲ್ಲಿನ ಅಭಿಮಾನಿಗಳು ನಿಮ್ಮನ್ನು ತಲೆ ಮೇಲಿಟ್ಟು ಮೆರೆಯುತ್ತಾರೆ ಎಂದಿದ್ದಾರೆ.