Publish Date: Thu, 09 Dec 2021 (09:15 IST)
Updated Date: Thu, 09 Dec 2021 (09:25 IST)
ಮುಂಬೈ: ಎಲ್ಲಾ ಸರಿ ಹೋಗಿದ್ದರೆ ದ.ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಟೆಸ್ಟ್ ತಂಡದ ಜೊತೆಗೇ ಬಿಸಿಸಿಐ ಆಯ್ಕೆಗಾರರು ಪ್ರಕಟಿಸಬೇಕಿತ್ತು. ಆದರೆ ಅದಕ್ಕೆ ಕೋಚ್ ದ್ರಾವಿಡ್, ವಿರಾಟ್ ಕೊಹ್ಲಿ ಬ್ರೇಕ್ ಹಾಕಿದ್ದಾರೆ.
ದಕ್ಷಿಣಾ ಆಫ್ರಿಕಾ ವಿರುದ್ಧ ಏಕದಿನ ಸರಣಿ ನಡೆಯಲಿರುವುದು ಜನವರಿ 19 ರಿಂದ. ಅದಕ್ಕೆ ಇನ್ನೂ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯಾವಕಾಶವಿದೆ. ಈ ನಡುವೆ ವಿಜಯ್ ಹಜಾರೆ ಟ್ರೋಫಿ ನಡೆಯಲಿದ್ದು, ಉತ್ತಮ ಆಟ ಪ್ರದರ್ಶಿಸಿದ ಪ್ರತಿಭಾವಂತರನ್ನು ಟೀಂ ಇಂಡಿಯಾಗೆ ಆಯ್ಕೆ ಮಾಡಬಹುದಾಗಿದೆ.
ಹೀಗಾಗಿ ದ್ರಾವಿಡ್ ಮತ್ತು ಕೊಹ್ಲಿ ಈಗಲೇ ತಂಡವನ್ನು ಆಯ್ಕೆ ಮಾಡುವುದು ಬೇಡ ಎಂದು ಖಡಕ್ ನಿರ್ಧಾರ ತಿಳಿಸಿದರು ಎನ್ನಲಾಗಿದೆ. ಹೀಗಾಗಿ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಕೆಲವು ದಿನಗಳ ಬಳಿಕ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಲು ನಿರ್ಧರಿಸಿತು ಎನ್ನಲಾಗಿದೆ. ಕೇವಲ ಏಕದಿನ ನಾಯಕನ ಬದಲಾವಣೆ ಮಾತ್ರ ಮಾಡಿ ಮುಂದಿನ ದಿನಗಳಲ್ಲಿ ಏಕದಿನ ಸರಣಿಗೆ ತಂಡ ಘೋಷಿಸಲು ತೀರ್ಮಾನಿಸಲಾಯಿತು.