ಬೆಂಗಳೂರು: ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನೇಮಕ ಮಾಡಿರುವ ಸರ್ಕಾರದ ನಿರ್ಧಾರ ಈಗ ಚರ್ಚೆಗೆ ಕಾರಣವಾಗಿದೆ. ಆದರೆ ಈ ಹಿಂದೆ ಧೋನಿಯೂ ಮೈಸೂರು ಸ್ಯಾಂಡಲ್ ರಾಯಭಾರಿಯಾಗಿದ್ದರು. ಆಗಲೂ ವಿವಾದವಾಗಿತ್ತು.
ಮೈಸೂರು ಸ್ಯಾಂಡಲ್ ನ್ನು ರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಲು ಪರಭಾಷಾ ನಾಯಕಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಸಮಜಾಯಿಷಿ ನೀಡಿದ್ದಾರೆ.
ಈ ಹಿಂದೆ 2006 ರಲ್ಲಿ ಆಗ ಭಾರತೀಯ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದ ಕ್ರಿಕೆಟಿಗ ಎಂಎಸ್ ಧೋನಿಯನ್ನು ಕೆಎಸ್ ಡಿಎಲ್ ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನೇಮಕ ಮಾಡಿತ್ತು. ಧೋನಿ ರಾಯಭಾರಿಯಾಗಿದ್ದಕ್ಕೆ ಕನ್ನಡಿಗರಿಂದ ಆಕ್ಷೇಪವಿರಲಿಲ್ಲ. ಬದಲಾಗಿ ಖುಷಿಪಟ್ಟಿದ್ದರು.
ಆದರೆ ಧೋನಿ ಬಳಿಕ ಕ್ರಿಕೆಟ್ ಜಗತ್ತಿನಲ್ಲಿ ಖ್ಯಾತಿ ಹೆಚ್ಚಿಸಿಕೊಂಡರು. ನೂರಾರು ಕೋಟಿ ಒಪ್ಪಂದಗಳ ಉತ್ಪನ್ನಗಳು ಅವರನ್ನು ಹುಡುಕಿಕೊಂಡು ಬರುತ್ತಿತ್ತು. ಇದರ ನಡುವೆ ಅವರು ಮೈಸೂರು ಸ್ಯಾಂಡಲ್ ಸೋಪ್ ಗೆ ಕೊಡಬೇಕಾದ ಸಮಯ ಕೊಡಲಿಲ್ಲ. ಹೀಗಾಗಿ 2007 ರಲ್ಲಿ ಅವರೊಂದಿಗಿನ ಒಪ್ಪಂದ ಕಡಿತ ಮಾಡಲಾಯಿತು. ಇದರಿಂದಾಗಿ ಧೋನಿ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಈಗ ಮತ್ತೊಬ್ಬ ಪರಭಾಷಾ ಸ್ಟಾರ್ ಈ ಸೋಪ್ ನ ರಾಯಭಾರಿಯಾಗಿದ್ದಾರೆ. ಆದರೆ ಅವರನ್ನು ನೇಮಕ ಮಾಡಿರುವುದಕ್ಕೆ ಕನ್ನಡ ಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.