ನವದೆಹಲಿ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಕಹಿಸುದ್ದಿ. ಇದೇ 23ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್ಸಿಬಿ– ಸನ್ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ.
ಮಳೆಯ ಕಾರಣಕ್ಕೆ ಮೇ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಸನ್ರೈಸರ್ಸ್ ಹೈದರಾಬಾದ್(ಎಸ್ಆರ್ಎಚ್) ನಡುವಿನ ಪಂದ್ಯವನ್ನು ಲಖನೌಗೆ ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ ಮೇ 17ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಕೆಕೆಆರ್–ಆರ್ಸಿಬಿ ನಡುವಿನ ಪಂದ್ಯವೂ ರದ್ದಾಗಿತ್ತು.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಫೈನಲ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕ್ವಾಲಿಫೈಯರ್–2 ಪಂದ್ಯಕ್ಕೂ ಅಹಮದಾಬಾದ್ ಆತಿಥ್ಯ ವಹಿಸಲಿದೆ.
ಕ್ವಾಲಿಫೈಯರ್–1 ಮತ್ತು ಎಲಿಮೀನೇಟರ್ ಪಂದ್ಯಗಳು ಮುಲ್ಲನಪುರ ಕ್ರೀಡಾಂಗಣದಲ್ಲಿ ಮೇ 29 ಮತ್ತು ಮೇ 30ರಂದು ನಡೆಯಲಿದೆ. ಜೂನ್ 3ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಹಿಂದಿನ ವೇಳಾಪಟ್ಟಿ ಪ್ರಕಾರ, ಕ್ವಾಲಿಫೈಯರ್–1 ಮತ್ತು ಎಲಿಮೀನೆಟರ್ ಪಂದ್ಯಗಳು ಹೈದರಾಬಾದ್ನಲ್ಲಿ, ಕ್ವಾಲಿಫೈಯರ್–2, ಫೈನಲ್ ಪಂದ್ಯ ಕೋಲ್ಕತ್ತದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಭಾರತ–ಪಾಕಿಸ್ತಾನದ ನಡುವಿನ ಸಂಘರ್ಷದಿಂದ ಪಂದ್ಯಗಳು ಮುಂದೂಡಲ್ಪಟ್ಟಿದ್ದರಿಂದ ವೇಳಾಪಟ್ಟಿಯಲ್ಲಿ ಪರಿಷ್ಕರಣೆಯಾಗಿದೆ.