Publish Date: Sat, 02 Sep 2023 (18:13 IST)
Updated Date: Sat, 02 Sep 2023 (18:16 IST)
ಪಲ್ಲಿಕೆಲೆ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಪಾಕಿಸ್ತಾನ ವಿರುದ್ಧ ಆಡುತ್ತಿರುವ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲೇ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ರೋಹಿತ್ ಶರ್ಮಾ 22 ಎಸೆತ ಎದುರಿಸಿ 11, ಶುಬ್ಮನ್ ಗಿಲ್ 32 ಎಸೆತಗಳಿಂದ ಕೇವಲ 10, ವಿರಾಟ್ ಕೊಹ್ಲಿ 4, ಶ್ರೇಯಸ್ ಅಯ್ಯರ್ 14 ರನ್ ಗಳಿಸಿ ಔಟಾದರು.
ಒಂದು ಹಂತದಲ್ಲಿ ಕೇವಲ 66 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಆಧಾರವಾದರು. ಇಶಾನ್ 56, ಹಾರ್ದಿಕ್ 36 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ 30 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.
ಪಾಕ್ ವಿರುದ್ಧ ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಕಳಪೆ ಬ್ಯಾಟಿಂಗ್ ಗೆ ನೆಟ್ಟಿಗರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಅತಿಯಾದ ಪ್ರಯೋಗ, ಹೊಸ ಆಯ್ಕೆ ಸಮಿತಿ ನೇಮಿಸಿ ತಂಡವನ್ನು ಹಳ್ಳ ಹಿಡಿಸಿದ್ದಾರೆ ಎಂದು ಜಯ್ ಶಾ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ.