Publish Date: Tue, 30 Jan 2024 (10:01 IST)
Updated Date: Tue, 30 Jan 2024 (10:03 IST)
ಬೆಂಗಳೂರು: ವಿವಾಹ ಸಂದರ್ಭದಲ್ಲಿ ಕೆಲವರು ಜ್ಯೋತಿಷಿಗಳ ಸಲಹೆ ಪ್ರಕಾರ ಕುಂಭ ಮದುವೆ ಮಾಡುತ್ತಾರೆ. ಹೀಗಂದರೆ ಏನು? ಯಾಕೆ ಮಾಡಬೇಕು? ನೋಡೋಣ.
ಜಾತಕದಲ್ಲಿ ಕುಜ ದೋಷ ಅಥವಾ ಎರಡು ಮದುವೆಯ ಯೋಗವಿದ್ದಾಗ ಕುಂಭ ವಿವಾಹ ಮಾಡುವುದು ಪದ್ಧತಿ. ವಿಶೇಷವಾಗಿ ಎರಡನೇ ಮದುವೆ ಯೋಗವಿರುವ ಕನ್ಯೆಗೆ ದೋಷ ಪರಿಹಾರಕ್ಕಾಗಿ ಕುಂಭ ಮದುವೆ ಮಾಡಿಸಲಾಗುತ್ತದೆ. ಮಣ್ಣಿನ ಮಡಕೆಯನ್ನು ಮದುಮಗನಂತೆ ಸಿಂಗರಿಸಿ ತಾಳಿ ಕಟ್ಟಿ ಶಾಸ್ತ್ರೋಸ್ತ್ರಕವಾಗಿ ಮದುವೆ ಶಾಸ್ತ್ರ ಮಾಡಿಸಲಾಗುತ್ತದೆ.
ಮದುವೆ ಸಂದರ್ಭದಲ್ಲಿ ಮಾಡುವ ಎಲ್ಲಾ ವಿಧಿ ವಿಧಾನಗಳನ್ನು ಈ ಸಂದರ್ಭದಲ್ಲಿ ಮಡಕೆಯೊಂದಿಗೆ ಮಾಡಲಾಗುತ್ತದೆ. ಕನ್ಯಾ ದಾನ, ಹೂ ಹಾರ ಬದಲಾವಣೆ, ತಾಳಿ ಶಾಸ್ತ್ರ ಇತ್ಯಾದಿ ಮದುವೆಯ ಎಲ್ಲಾ ಶಾಸ್ತ್ರಗಳನ್ನೂ ಮಾಡಲಾಗುತ್ತದೆ. ಮದುವೆಯ ಶಾಸ್ತ್ರ ಮುಗಿದ ಮೇಲೆ ಮಡಕೆಯನ್ನು ಒಡೆದು ನೀರಿನಲ್ಲಿ ಬಿಟ್ಟರೆ ಮದುವೆ ಶಾಸ್ತ್ರ ಮುಗಿದಂತೆ.
ಈ ಶಾಸ್ತ್ರದ ಬಳಿಕ ದೋಷ ಪರಿಹಾರವಾದಂತೆ. ಹಾಗೂ ದೋಷವಿದ್ದ ಯುವತಿ ತಾನು ಬಯಸಿದ ವರನನ್ನು ನಿರಾತಂಕವಾಗಿ ಮದುವೆಯಾಗಬಹುದು. ಒಂದು ವೇಳೆ ಈ ಪರಿಹಾರ ಮಾಡದೇ ಮದುವೆಯಾದಲ್ಲಿ ಅಂತಹ ಕನ್ಯೆಗೆ ದಾಂಪತ್ಯ ಜೀವನದಲ್ಲಿ ತೊಂದರೆ ಎದುರಾಗಬಹುದು.