Publish Date: Thu, 25 Jan 2024 (10:48 IST)
Updated Date: Thu, 25 Jan 2024 (10:53 IST)
ಬೆಂಗಳೂರು: ಕೆಲವರಿಗೆ ಪುಸ್ತಕದ ನಡುವೆ ನವಿಲು ಗರಿ ಇಡುವ ಅಭ್ಯಾಸವಿರುತ್ತದೆ. ಅದಕ್ಕೆ ಅವರದ್ದೇ ಆದ ನಂಬಿಕೆಗಳೂ, ಭಾವನಾತ್ಮಕ ಬಂಧವೂ ಇರುತ್ತದೆ. ಆದರೆ ಜ್ಯೋತಿಷ್ಯ ಪ್ರಕಾರ ನವಿಲುಗರಿಯನ್ನು ಪುಸ್ತಕದ ನಡುವೆ ಇಡುವುದು ತಪ್ಪೋ ಸರಿಯೋ ಎಂದು ನೋಡೋಣ.
ಪುಸ್ತಕದ ನಡುವೆ ನವಿಲು ಗರಿ ಇಟ್ಟರೆ ಕೆಲವು ಸಮಯದ ನಂತರ ಅದು ಮರಿ ಹಾಕುತ್ತದೆ ಎಂದು ಚಿಕ್ಕವರಿದ್ದಾಗ ನಮ್ಮಲ್ಲೊಂದು ಮುಗ್ಧ ನಂಬಿಕೆಯಿತ್ತು. ಆದರೆ ಇದು ಕೇವಲ ನಂಬಿಕೆಯಷ್ಟೇ. ಹಾಗಿದ್ದರೂ ಪುಸ್ತಕದ ನಡುವೆ ನವಿಲು ಗರಿ ಇಡುವವರು ಕೆಲವೊಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಸುಖಾ ಸುಮ್ಮನೇ ಪುಸ್ತಕದ ನಡುವೆ ನವಿಲು ಗರಿಯ ತುಣುಕೊಂದನ್ನು ತಂದಿಟ್ಟುಕೊಳ್ಳುವಂತಿಲ್ಲ. ಶಾಸ್ತ್ರದ ಪ್ರಕಾರ ತುಂಡಾದ ಅಥವಾ ಹರಿದ ನವಿಲು ಗರಿಯನ್ನು ಪುಸ್ತಕದ ನಡುವೆ ಇಟ್ಟುಕೊಳ್ಳುವುದು ಒಂದು ರೀತಿಯಲ್ಲಿ ಒಳ್ಳೆಯ ಶಕುನವಲ್ಲ ಎಂಬ ನಂಬಿಕೆಯಿದೆ. ಇದು ನಿಮಗೆ ದುರಾದೃಷ್ಟ ತರಬಹುದು.
ಪುಸ್ತಕದ ನಡುವೆ ಇರುವ ನವಿಲುಗರಿಯನ್ನು ಶುದ್ಧ ಕೈಗಳಿಂದ ಸ್ಪರ್ಶಿಸಬೇಕು. ಒಂದು ವೇಳೆ ಅಕಸ್ಮಾತ್ತಾಗಿ ಅದು ನೆಲಕ್ಕೆ ಬಿದ್ದರೆ ಮತ್ತೆ ಅದನ್ನು ಪುಸ್ತಕಕ್ಕೆ ಸೇರಿಸುವ ಮುನ್ನ ನೀಟ್ ಆಗಿ ತೊಳೆದು ಇಡುವುದು ಉತ್ತಮ. ನವಿಲುಗರಿಯನ್ನು ಪುಸ್ತಕದ ನಡುವೆ ಇಟ್ಟುಕೊಳ್ಳುವುದರಿಂದ ವಿದ್ಯಾ ದೇವತೆಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ನವಿಲು ಗರಿ ಭಗವಾನ್ ಕೃಷ್ಣನಿಗೆ ಪ್ರಿಯವಾದ ವಸ್ತುವಾಗಿರುವುದರಿಂದ ಅವನ ಆಶೀರ್ವಾದವೂ ಸಿಗುತ್ತದೆ.
ಅಲ್ಲದೆ ನವಿಲುಗರಿ ಇಟ್ಟುಕೊಳ್ಳುವುದರಿಂದ ನಿಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ, ಅಡೆತಡೆಗಳಿದ್ದರೂ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಪುಸ್ತಕದ ನಡುವೆ ನವಿಲುಗರಿ ಇಟ್ಟುಕೊಳ್ಳುವುದು ಅದೃಷ್ಟದ ಜೊತೆಗೆ ಯಶಸ್ಸಿನ ದಾರಿ ತೋರಿಸುತ್ತದೆ ಎಂಬುದು ನಂಬಿಕೆ.