Publish Date: Mon, 27 May 2024 (09:23 IST)
Updated Date: Mon, 27 May 2024 (09:46 IST)
ಬೆಂಗಳೂರು: ನಮ್ಮ ಜಾತಕದಲ್ಲಿ ಕಂಡುಬರುವ ದೋಷಗಳಲ್ಲಿ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುವ ದೋಷವೆಂದರೆ ಅದು ಕಾಳ ಸರ್ಪ ದೋಷ. ಇದು ಎದುರಾದರೆ ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ.
ನಮ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ನಡುವೆ ಎಲ್ಲಾ ಗ್ರಹಗಳು ಸಿಲುಕಿಕೊಂಡಾಗ ಕಾಳ ಸರ್ಪ ದೋಷ ಕಂಡುಬರುತ್ತದೆ. ರಾಹು ಸರ್ಪದ ಶಿರದಂತೆ ಮತ್ತು ಕೇತು ಬಾಲದಂತೆ ಕಂಡುಬರುತ್ತದೆ. ಕುಂಡಲಿಯಲ್ಲಿ ಗ್ರಹಗತಿಗಳು ಈ ರೀತಿ ಇದ್ದಾಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತೀರಿ.
ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ, ವ್ಯಾಪಾರ, ವ್ಯವಹಾರಗಳಿಗೆ ತೊಂದರೆ, ಹಣಕಾಸಿನ ನಷ್ಟ, ಅಪವಾದಗಳು, ವೈವಾಹಿಕ ಜೀವನದಲ್ಲಿ ಸಮಸ್ಯೆ ಕಂಡುಬರಬಹುದು. ಕೈ ಹಿಡಿದ ಕೆಲಸಗಳೊಂದೂ ಕೈಗೂಡದಂತಾಗಬಹುದು. ವಿಪರೀತ ಚಿಂತೆ, ಮಾನಸಿಕವಾಗಿಯೂ ಕುಗ್ಗಿ ಹೋಗುತ್ತೀರಿ.
ಕಾಳಸರ್ಪ ದೋಷದ ಪ್ರಭಾವ ಕೊಂಚ ಮಟ್ಟಿಗೆ ಕಡಿಮೆಯಾಗಬೇಕಾದರೆ ಶಿವ ಮತ್ತು ನಾಗನಿಗೆ ಪೂಜೆ ಮಾಡಬೇಕು. ಸೋಮವಾರಗಳಂದು ಉಪವಾಸವಿದ್ದು ಶಿವನ ಪೂಜೆ ಮಾಡಬೇಕು. ಜೊತೆಗೆ ಓಂ ನಮಃ ಶಿವಾಯ ಮಂತ್ರ ಜಪಿಸಬೇಕು. ಜೊತೆಗೆ ನಾಗನಿಗೆ ಸಂಬಂಧಿಸಿದಂತೆ ಪೂಜೆ ಓಂ ನಾಗಕುಲಾಯ ವಿದ್ಮಹೇ ವಿಷದಂತಾಯ ಧೀಮಹೀ ತನ್ನೋ ಸರ್ಪ ಪ್ರಚೋದಯಾತ್ ಮಂತ್ರವನ್ನು ಪಠಿಸಬೇಕು. ಜೊತೆಗೆ ವಿಷ್ಣುಸಹಸ್ರನಾಮಾವಳಿಯನ್ನು ಪ್ರತಿನಿತ್ಯ ಓದುವುದು ದೋಷವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.