Publish Date: Mon, 23 Sep 2024 (08:51 IST)
Updated Date: Mon, 23 Sep 2024 (08:54 IST)
ಬೆಂಗಳೂರು: ಶಿವನ ಮತ್ತೊಂದು ರೂಪವಾದ ಮೃತ್ಯುಂಜಯನನ್ನು ಕುರಿತು ಜಪಿಸಿದರೆ ನಮಗೆ ಮೃತ್ಯು ಭಯ, ರೋಗ ಭಯ ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಮೃತ್ಯುಂಜಯ ಮಂತ್ರದ ಬಗ್ಗೆ ಇಂದು ತಿಳಿದುಕೊಳ್ಳೋಣ.
ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಭಗವಾನ್ ಶಿವನು ಅತ್ಯಂತ ಸಂಪ್ರೀತನಾಗುತ್ತಾನೆ. ಮರಣ ಭಯವಿದ್ದರೆ ಮೃತ್ಯುಂಜಯ ಮಂತ್ರ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಶಿವ ಪುರಾಣದಲ್ಲೇ ಹೇಳಲಾಗಿದೆ. ಗ್ರಹಗತಿಗಳ ಸಮಸ್ಯೆಯಿದ್ದರೂ ಮೃತ್ಯುಂಜಯ ಮಂತ್ರ ಜಪಿಸುವುದರಿಂದ ದೋಷ ನಿವಾರಣೆಯಾಗುತ್ತದೆ.
ಓಂ ತ್ರಯಂಬಕಂ ಯಜಾಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಂಮೃತಾತ್
ಇದು ಮೃತ್ಯುಂಜಯ ಮಂತ್ರವಾಗಿದೆ. ಇದನ್ನು ಪ್ರತಿನಿತ್ಯ 108 ಬಾರಿ ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಕಾಣುವಿರಿ. ಆದರೆ ನೆನಪಿರಲಿ, ಮೃತ್ಯುಂಜಯ ಮಂತ್ರ ಪಠಿಸುವಾಗ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು. ತಪ್ಪುಗಳಾದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಕೈಯಲ್ಲಿ ರುದ್ರಾಕ್ಷಿ ಸರ ಹಿಡಿದು ಮಣೆ ಮೇಲೆ ಕುಳಿತು ಮೃತ್ಯುಂಜಯ ಜಪ ಮಾಡಬೇಕು. ಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಮನಸ್ಸಿನಲ್ಲೇ ಹೇಳಬೇಕು. ಶಿವನ ಫೋಟೋ ಮುಂದೆ ಕುಳಿತುಕೊಂಡು ಏಕಾಗ್ರತೆಯಿಂದ ಮಂತ್ರೋಚ್ಛಾರಣೆ ಮಾಡಬೇಕು.