Select Your Language

Notifications

webdunia
webdunia
webdunia
webdunia

ಸೆಹ್ವಾಗ್ ತವರಿಗೆ; ಆಂಗ್ಲರ ನಾಡಿಗೆ ಕಾರ್ತಿಕ್

ಸೆಹ್ವಾಗ್ ತವರಿಗೆ; ಆಂಗ್ಲರ ನಾಡಿಗೆ ಕಾರ್ತಿಕ್
ನವದೆಹಲಿ , ಬುಧವಾರ, 10 ಜೂನ್ 2009 (11:45 IST)
ಗಾಯಾಳುವಾಗಿ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರಗುಳಿದಿರುವ ವೀರೇಂದ್ರ ಸೆಹ್ವಾಗ್ ಬದಲಿಗೆ ಭಾರತ ತಂಡವನ್ನು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರ ಆಡಿದ್ದ ದಿನೇಶ್ ಕಾರ್ತಿಕ್ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

ಬಾಂಗ್ಲಾದೇಶದ ವಿರುದ್ಧದ ಆರಂಭಿಕ ಪಂದ್ಯ ಮತ್ತು ಅದಕ್ಕೂ ಮೊದಲು ನಡೆದಿದ್ದ ಎರಡು ಅಭ್ಯಾಸ ಪಂದ್ಯಗಳಿಂದ ದೂರ ಉಳಿದಿದ್ದ ಸೆಹ್ವಾಗ್ ವಿಶ್ವಕಪ್‌ನ ಮುಂದಿನ ಪಂದ್ಯಗಳಲ್ಲೂ ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಭುಜ ಗಾಯದಿಂದ ಬಳಲುತ್ತಿರುವ ಸೆಹ್ವಾಗ್ ಶಸ್ತ್ರಚಿಕಿತ್ಸೆ ಹಿನ್ನಲೆಯಲ್ಲಿ ತವರಿಗೆ ಮರಳಲಿದ್ದಾರೆ. ಅವರ ಬದಲಿಗೆ ಅಂತಿಮ 15 ಸದಸ್ಯರ ತಂಡವನ್ನು ಸೇರಿಕೊಳ್ಳಲು ದಿನೇಶ್ ಕಾರ್ತಿಕ್ ಶೀಘ್ರದಲ್ಲೇ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದ್ದಾರೆ.

ಕಾರ್ತಿಕ್ ವಿಕೆಟ್ ಕೀಪರ್ ಕೂಡ ಆಗಿರುವ ಕಾರಣ ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಒಂದು ವೇಳೆ ನಾಯಕ ಮಹೇಂದ್ರ ಸಿಂಗ್ ಧೋನಿ ಗಾಯಾಳುವಾದಲ್ಲಿ ಕಾರ್ತಿಕ್‌ರನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಟೀಮ್ ಇಂಡಿಯಾ ಅಂತಿಮ ಆಯ್ಕೆ ಪಟ್ಟಿಯಲ್ಲಿ ಈ ಮೊದಲು ದಿನೇಶ್ ಕಾರ್ತಿಕ್ ಸ್ಥಾನ ಪಡೆಯಲು ವಿಫಲರಾಗಿದ್ದರು.

2007ರ ಟ್ವೆಂಟಿ-20 ವಿಶ್ವಕಪ್ ವಿಜೇತ ಭಾರತೀಯ ತಂಡದಲ್ಲಿ ಕಾರ್ತಿಕ್ ಕೂಡ ಇದ್ದರು. ಆದರೆ ಈ ಬಾರಿ ಆಯ್ಕೆ ಸಂದರ್ಭದಲ್ಲಿ ಅವರ ಅನಿಶ್ಚಿತ ಲಯದ ಕಾರಣ ರಾಷ್ಟ್ರೀಯ ತಂಡಕ್ಕೆ ಆರಿಸಲು ಆಯ್ಕೆಗಾರರು ಹಿಂದೇಟು ಹಾಕಿದ್ದರು. ಆದರೆ ಇತ್ತೀಚೆಗಷ್ಟೇ ಮುಕ್ತಾಯ ಕಂಡಿದ್ದ ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಕಾರ್ತಿಕ್ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೆ ಗುರುತಿಸಿಕೊಂಡಿದ್ದಾರೆ.

ಕಾರ್ತಿಕ್ ಇದುವರೆಗೆ ಭಾರತದ ಪರ ಆರು ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯಗಳನ್ನಾಡಿದ್ದಾರೆ. ಆದರೆ ನಿರ್ವಹಣೆ ಮಟ್ಟವನ್ನು ಗಮನಿಸಿದಾಗ ಅವರದ್ದು ಪೇಲವ ಪ್ರದರ್ಶನ. ತನ್ನ ಆರಂಭಿಕ ಪಂದ್ಯದಲ್ಲಿ ಅಜೇಯ 31 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಪಂದ್ಯವನ್ನು ಗೆಲ್ಲಿಸುವಲ್ಲಿ ಕಾರ್ತಿಕ್ ಮಹತ್ವದ ಪಾತ್ರವಹಿಸಿದ್ದರಾದರೂ ನಂತರ ಅವರಾಡಿದ ಐದೂ ಪಂದ್ಯಗಳಲ್ಲಿ ವಿಫಲರಾಗಿದ್ದರು. ಆರು ಅಂತಾರಾಷ್ಟ್ರೀಯ ಟ್ವೆಂಟಿ-20ಗಳನ್ನಾಡಿರುವ ಕಾರ್ತಿಕ್ ಇದುವರೆಗೆ ಗಳಿಸಿರುವ ರನ್ 67 ಮಾತ್ರ.

ಆರಂಭಿಕ ಆಟಗಾರ ಸೆಹ್ವಾಗ್ ಸ್ಥಾನಕ್ಕೆ ರೋಹಿತ್ ಶರ್ಮಾ ನ್ಯಾಯ ಒದಗಿಸುವಲ್ಲಿ ಸಫಲರಾಗಿರುವ ಕಾರಣ ದಿನೇಶ್ ಕಾರ್ತಿಕ್‌ರಿಗೆ ಆಡಲು ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆ. ಹಾಗೊಂದು ವೇಳೆ ಯಾರಾದರೂ ಗಾಯಗೊಂಡಲ್ಲಿ ಕಾರ್ತಿಕ್ ಕಣಕ್ಕಿಳಿಯಬಹುದಾಗಿದೆ.

Share this Story:

Follow Webdunia kannada