ಸಚಿನ್ಗಾಗಿ ವಿಶ್ವಕಪ್ ಗೆಲ್ಲಲಿದ್ದೇವೆ: ಗಂಭೀರ್
ನವದೆಹಲಿ , ಮಂಗಳವಾರ, 18 ಜನವರಿ 2011 (17:40 IST)
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗಾಗಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪನ್ನು ಗೆಲ್ಲಲಿದ್ದೇವೆ ಎಂದು ಎಡಗೈ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಭರವಸೆ ವ್ಯಕ್ತಪಡಿಸಿದ್ದಾರೆ. ಇದು ಸಚಿನ್ ಅವರ ಕೊನೆಯ ವಿಶ್ವಕಪ್ ಆಗದಿರಲಿ ಎಂದು ನಾನು ಪ್ರಾಮಾಣಿಕವಾಗಿ ಹಾರೈಸುತ್ತೇನೆ. ಯಾಕೆಂದರೆ ಅವರು ಇನ್ನೊಂದು ವಿಶ್ವಕಪ್ ಆಡಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ. ಹಾಗೆಯೇ ಈ ಬಾರಿಯ ವಿಶ್ವಕಪನ್ನು ಈ ದಿಗ್ಗಜ ಆಟಗಾರನಿಗಾಗಿ ಗೆಲ್ಲಲಿದ್ದೇವೆ ಎಂದು ಗೌತಿ ನುಡಿದರು. ಅದೇ ಹೊತ್ತಿಗೆ ಈ ಮಹತ್ತರ ಕೂಟದಲ್ಲಿ ಯುವರಾಜ್ ಸಿಂಗ್ ಅವರ ಫಾರ್ಮ್ ನಿರ್ಣಾಯಕವೆನಿಸಲಿದೆ ಎಂದವರು ಹೇಳಿದರು. ಯುವಿ ಬ್ಯಾಟಿಂಗ್ ಸಹಿತ ಉತ್ತಮ ಕೂಡಾ ದಾಳಿ ಸಂಘಟಿಸಬಲ್ಲರು. ಅವರೊಬ್ಬ ಉತ್ಸಾಹಿ ಆಟಗಾರ ಎಂದರು. ಇತ್ತೀಚೆಗಿನ ದಿನಗಳಲ್ಲಿ ಗಾಯದ ಸಮಸ್ಯೆಯು ಆತಂಕಕ್ಕೆ ಕಾರಣವಾಗಿದೆ. ಆದರೆ ವಿಶ್ವಕಪ್ ವೇಳೆ ಎಲ್ಲವೂ ಸರಿ ಹೋಗಲಿದೆ ಎಂದವರು ಸೇರಿಸಿದರು. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಾನು ಗಾಯಗೊಂಡಿದ್ದೆ. ಆದರೆ ವಿಶ್ವಕಪ್ಗೆ ಪೂರ್ಣ ದೈಹಿಕ ಕ್ಷಮತೆ ವಾಪಾಸ್ ಪಡೆಯಲಿದ್ದೇನೆ ಎಂದವರು ಹೇಳಿದರು. ಹಾಗೆಯೇ ಕೊಲ್ಕತ್ತಾ ತಂಡದ ಆಪ್ತ ಸಲಹಾಕಾರನಾಗಿ ಸೌರವ್ ಗಂಗೂಲಿ ನೇಮಕಗೊಳ್ಳಬೇಕು ಎಂದವರು ಹೇಳಿದರು. ಗಂಗೂಲಿ ಕ್ರಿಕೆಟ್ನ ದಂತಕಥೆ. ಇದರಲ್ಲಿ ಯಾವುದೇ ಸಂಶಯವೂ ಇಲ್ಲ. ಕೆಕೆಆರ್ ಜತೆ ಅವರು ಮುಂದುವರಿಯುವ ವಿಶ್ವಾಸವಿದೆ ಎಂದರು. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿ