ಉದ್ದನೆಯ ಕೂದಲು ಹಾಗೂ ದಷ್ಠಪುಷ್ಟ ದೇಹದಿಂದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನೇ ಹೋಲುವ ಯುವ ಭರವಸೆಯ ಆಟಗಾರ ಸೌರವ್ ತಿವಾರಿ, ಭವಿಷ್ಯದ ಯಾವುದೇ ಚಿಂತಿಸುತ್ತಿಲ್ಲ, ವರ್ತಮಾನ ಕಾಲದ ಬಗ್ಗೆ ಯೋಚಿಸುತ್ತಿದ್ದೇನೆ ಎಂದಿದ್ದಾರೆ.
ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಯುವ ಆಟಗಾರರಿಗೂ ಮುಂಬರುವ ನ್ಯೂಜಿಲೆಂಡ್ ಸರಣಿ ಅತೀ ಪ್ರಾಮುಖ್ಯವೆನಿಸಿದೆ. ಆದರೆ ನಾಯಕ ಧೋನಿ ರೀತಿಯಲ್ಲಿಯೇ ಹೆಚ್ಚು ಹೊತ್ತು ನಿದ್ದೆಯಲ್ಲಿಯೇ ಕಳೆಯಲು ಇಷ್ಟಪಡುವ ತಿವಾರಿ ಕೂಡಾ ಈ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದ್ದಾರೆ.
ನಾನು ವಿಶ್ವಕಪ್ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. 11ರ ಹರೆಯದಿಂದಲೇ ಕ್ರಿಕೆಟ್ ಆಟವನ್ನು ಆರಂಭಿಸಿದ್ದೇನೆ. ನನ್ನ ಆಟವನ್ನು ನಾನು ಪ್ರೀತಿಸುತ್ತಿದ್ದೇನೆ ಎಂದವರು ಉತ್ತರ ನೀಡಿದರು.
ಪ್ರತಿಯೊಬ್ಬ ಯುವ ಆಟಗಾರನ ಹಾಗೆಯೇ ನನಗೂ ಕೂಡಾ ವಿಶ್ವಕಪ್ನಲ್ಲಿ ಆಡಬೇಕೆಂಬುದು ಬಾಲ್ಯದ ಕನಸಾಗಿದೆ. ಆದರೆ ನಾನೀದರ ಬಗ್ಗೆ ಚಿಂತೆ ನಡೆಸುತ್ತಿಲ್ಲ. ಯಾಕೆಂದರೆ ವರ್ತಮಾನದ ಬಗ್ಗೆ ಯೋಚಿಸುತ್ತಿದ್ದು, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯತ್ತ ಗಮನ ಕೇಂದ್ರಿಕರಿಸಿದ್ದೇನೆ. ಇಲ್ಲಿ ರನ್ ಗಳಿಸುವುದೇ ನನ್ನ ಕೆಲಸ. ಉಳಿದೆಲ್ಲವೂ ದೇವರಿಗೆ ಬಿಟ್ಟುಕೊಡುತ್ತೇನೆ ಎಂದವರು ಹೇಳಿದರು.
ಸಾಬೀತು ಮಾಡಲಿದ್ದೇನೆ...
ಮತ್ತೊಂದೆಡೆ ಹೇಳಿಕೆ ನೀಡಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ದೀಮಾನ್ ಸಹಾ ತನಗೆ ಲಭಿಸಿರುವ ಅವಕಾಶವನ್ನು ಸದುಪಯೋಗಪಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲಿದ್ದೇನೆ ಎಂದು ಹೇಳಿದ್ದಾರೆ.
ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ರಾಂತಿ ನೀಡಿದ್ದರ ಹಿನ್ನೆಲೆಯಲ್ಲಿ ಸಹಾಗೆ ಅವಕಾಶ ಲಭಿಸಿತ್ತು. ಆ ಮೂಲಕ ಅನುಭವಿ ದಿನೇಶ್ ಕಾರ್ತಿಕ್ರನ್ನು ಕಡೆಗಣಿಸಲಾಗಿತ್ತು.
ತಿವಾರಿ ತರಹನೇ ಹೇಳಿಕೆ ನೀಡಿರುವ ಸಹಾ, ನಾನೀಗ ವಿಶ್ವಕಪ್ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಯಾವುದೇ ಒತ್ತಡವಿಲ್ಲದೆ ಆಡಲು ಇಷ್ಟಪಡುತ್ತಿದ್ದು, ಕೀಪಿಂಗ್ ಸಹಿತ ಬ್ಯಾಟಿಂಗ್ನಲ್ಲೂ ಗಮನಾರ್ಹ ಪ್ರದರ್ಶನ ನೀಡುವತ್ತ ಗಮನ ಕೇಂದ್ರಿಕರಿಸಿದ್ದೇನೆ ಎಂದಿದ್ದಾರೆ.
ಭರವಸೆ ಕೈಬಿಟ್ಟಿಲ್ಲ...
ಕಳೆದ ನಾಲ್ಕು ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದ ಉತ್ತರ ಪ್ರದೇಶ ಆಟಗಾರ ಮೊಹಮ್ಮದ್ ಕೈಫ್, ತಾನೀಗಲೂ ಭರವಸೆ ಕೈಬಿಟ್ಟಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪ್ರಸ್ತುತ ರಣಜಿ ಟ್ರೋಫಿನಲ್ಲೂ ನಾನು ಉತ್ತಮ ಪ್ರದರ್ಶನ ನೀಡುವಲ್ಲಿ ಎಡುವುತ್ತಿದ್ದೇನೆ. ಆದರೆ ನಂಬಿಕೆ ಕೈಬಿಟ್ಟಿಲ್ಲ. ದೇಶಿಯ ದರ್ಜೆನಲ್ಲಿ ನನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಲ್ಲಿ ಮತ್ತೊಮ್ಮೆ ತಂಡಕ್ಕೆ ಪುನರಾಮನ ಮಾಡಿಕೊಳ್ಳುವ ಭರವಸೆಯಿದೆ ಎಂದವರು ಹೇಳಿದರು. ಕೈಫ್ ತನ್ನ ಕೊನೆಯ ಏಕದಿನ ಪಂದ್ಯವನ್ನು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು.