ತಾನು ಕಪ್ತಾನನಾದ ನಂತರದ ನಾಲ್ಕು ಟೆಸ್ಟ್ ಪಂದ್ಯಗಳ ವಿಜಯಗಳಲ್ಲಿ ಇದು ಅತ್ಯಂತ ಕ್ಲಿಷ್ಟಕರವಾಗಿತ್ತು ಎಂದು ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟನ್ನು ಆರು ವಿಕೆಟ್ಗಳಿಂದ ಗೆದ್ದುಕೊಂಡ ನಂತರ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ತನ್ನ ನಾಯಕತ್ವವನ್ನು ವಿಶ್ಲೇಷಿಸಿಕೊಂಡರು.
"ಇದು ಅತ್ಯಂತ ಕಠಿಣ ಜಯ. ನಾವು ಟೆಸ್ಟ್ನ ಮೊದಲ ಮೂರು ದಿನ ಉತ್ತಮ ಪ್ರದರ್ಶನ ತೋರಿರಲಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ವಿಫಲತೆ ಎದುರಿಸಿದ್ದೆವು. ಆದರೆ ನಾವು ಕೊನೆಯ ಎರಡು ದಿನಗಳಲ್ಲಿ ಅತ್ಯುತ್ತಮ ಆಟವಾಡಿ ಪಂದ್ಯವನ್ನು ಗೆದ್ದುಕೊಂಡಿದ್ದೇವೆ" ಎಂದು ಮೊದಲ ಟೆಸ್ಟ್ ಬಗಲಿಗೆ ಹಾಕಿಕೊಂಡ ನಂತರ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ತನ್ನ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ತಂಡದ ಎಲ್ಲರ ಕೊಡುಗೆಗಳನ್ನು ಸ್ಮರಿಸುತ್ತಾ, 68 ಎಸೆತಗಳಿಂದ 83 ರನ್ ಪೇರಿಸಿ ಉತ್ತಮ ಆರಂಭವೊದಗಿಸಿಕೊಟ್ಟಿದ್ದ ಸೆಹ್ವಾಗ್ರನ್ನು ಅಭಿನಂದಿಸಿದ ಧೋನಿ, "ನಿಜವಾಗಿಯೂ ತೆಂಡೂಲ್ಕರ್ ಮತ್ತು ಯುವರಾಜ್ ಉತ್ತಮ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಶುಭಾಂತ್ಯಗೊಳಿಸಿದರು. ಆದರೆ ಇದೆಲ್ಲ ಸಾಧ್ಯವಾದದ್ದು ಸೆಹ್ವಾಗ್ ಅವರ ಅದ್ಭುತ ಆರಂಭದಿಂದ. ಅವರು ನಿಜಕ್ಕೂ ಉತ್ತಮ ಆಟಗಾರ ಮತ್ತು ಅವರಿಲ್ಲದೇ ಇರುತ್ತಿದ್ದರೆ ನಾವು ಪಂದ್ಯದಲ್ಲಿ ಹೆಣಗಾಡಬೇಕಾಗಿತ್ತು" ಎಂದು ಧೋನಿ ಹೇಳಿದ್ದಾರೆ.
"ಸಚಿನ್ ಶ್ರೇಷ್ಠ ಮತ್ತು ಯುವರಾಜ್ ಅತ್ಯದ್ಭುತ ಆಟಗಾರ. ನಾಲ್ಕನೇ ಮತ್ತು ಐದನೇ ದಿನ ನಿಜಕ್ಕೂ ಕಷ್ಟಕರವಾಗಿತ್ತು. ಹರಭಜನ್ ಜತೆ ನಾನು ಮೊದಲ ಇನ್ನಿಂಗ್ಸ್ನಲ್ಲಿ ಕೂಡಿ ಹಾಕಿದ ರನ್ ಗುರಿಯನ್ನು ಕಡಿಮೆ ಮಾಡುವಲ್ಲಿ ಸಹಕರಿಸಿತ್ತು" ಎಂದು ಅವರು ವಿಶ್ಲೇಷಿಸಿದರು.
ಚೆಪೌಕ್ ಪಿಚ್ ಬಗ್ಗೆ ಮಾತನಾಡುತ್ತಾ, "ವಿಕೆಟ್ ನಾಲ್ಕನೇ ಮತ್ತು ಐದನೇ ದಿನ ಬ್ಯಾಟ್ ಮಾಡಲು ಅನುಕೂಲವಾಗಿರಲಿಲ್ಲ. ಎಸೆತಗಳು ತಿರುವು ಕಾಣುತ್ತಾ ಹಾರುತ್ತಿತ್ತು. ಆದರೆ ನಮ್ಮ ದಾಂಡಿಗರು ಉತ್ತಮ ಆಟವಾಡಿದರು" ಎಂದು ಹೇಳಿದ್ದಾರೆ.