Webdunia - Bharat's app for daily news and videos

Install App

ಅಳುವುದೂ ಹೆಣ್ಣಿಂದ, ಆಳೋದೂ ಹೆಣ್ಣಿಂದ...!

Webdunia
ಹೊಳೆ ನರಸೀಪುರ ಮಂಜುನಾಥ, ದುಬೈ(ಯುಎಇ)

WD
ಇವಳೇ ನನ್ನ ಜೀವ, ಇವಳಿಂದಲೇ ನನ್ನ ಜೀವನ ಎಂದು ಭ್ರಮಿಸಿ ಎಲ್ಲವನ್ನೂ ಬಿಟ್ಟು ಹಿಂದೆ ಹೋದಾಗ, ಮೀನಾಳ ಸ್ಪಷ್ಟವಾದ ಪ್ರೇಮ ನಿರಾಕರಣೆಯಿಂದ ನೊಂದ ಮನಸ್ಸಿನೊಂದಿಗೆ ನಾನು, ನನ್ನ ಪಾಲಿಗೆ ಪಂಚಾಮೃತವಾಗಿ ಬಂದ ನನ್ನ ಕೆಲಸದ ಬಗ್ಗೆ ಹೆಚ್ಚೆಚ್ಚು ಗಮನ ಕೊಡಲಾರಂಭಿಸಿ, ನನ್ನ ತತ್ವ ಆದರ್ಶಗಳಿಗೆ ಅಂಟಿಕೊಂಡು ಬಿಟ್ಟಿದ್ದೆ. ವೃತ್ತಿ ಜೀವನದಲ್ಲಿ ಬಂದ ಹಲವಾರು ಸಮಸ್ಯೆಗಳಿಗೆ ಥಟ್ಟಂತ ಪರಿಹಾರ ಕಂಡು ಹಿಡಿದು, ಕೆಲವರು, ಹಲವಾರು ವರ್ಷಗಳಿಂದ ನಡೆಸುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿ, ಆ ನೆಪದಲ್ಲಿ, ಪೊಲೀಸು, ಕೋರ್ಟು, ಕಛೇರಿ ಎಲ್ಲಾ ನೋಡಿ, ಮಂಜುನಾಥ ಎಂದರೆ ಅವನೊಬ್ಬ ನಿರ್ದಯಿ, ಸಣ್ಣ ತಪ್ಪುಗಳಿಗೂ ಸಿಡುಕುವ ಕಟುಕ ಎನ್ನುವ ಮಟ್ಟಕ್ಕೆ ಬಂದು ನಿಂತು ಬಿಟ್ಟೆ.

ಪ್ರೀತಿ, ಪ್ರೇಮ, ಮಮಕಾರ, ವಾತ್ಸಲ್ಯ, ಕರುಣೆ ಇವೆಲ್ಲಾ ನನ್ನ ವೃತ್ತಿ ಜೀವನದ ಪದಕೋಶದಿಂದ ಕಣ್ಮರೆಯಾಗಿ ಬಿಟ್ಟಿದ್ದವು. ಆಗ ನನ್ನ ಮುಂದಿದ್ದದ್ದು ಏನಿದ್ದರೂ, ಕೆಲಸ, ಅದಕ್ಕೆ ಸಂಬಂಧಿಸಿದ ಕಾನೂನುಗಳು, ರೀತಿ ರಿವಾಜುಗಳು ಅಷ್ಟೇ! ಅವುಗಳ ಮುಂದೆ ನಾನು ಬೇರೆ ಯಾವುದೇ ಸಂಬಂಧಕ್ಕೂ ಬೆಲೆ ಕೊಡದ ಕಲ್ಲು ಬಂಡೆಯಾಗಿ ಬಿಟ್ಟೆ. ಆದರೆ, ಆ ನಿರ್ದಯಿ ಮನಃಸ್ಥಿತಿ ಹಲವಾರು ರೀತಿಯಲ್ಲಿ ಉತ್ತಮ ಫಲಿತಾಂಶಗಳನ್ನೇ ನೀಡಿ, ವೃತ್ತಿ ಜೀವನದಲ್ಲಿ ನನಗೇ ಗೊತ್ತಿಲ್ಲದಂತೆ, ನನ್ನನ್ನು ಮೇಲೆ ತಂದು ನನ್ನದೇ ಆದ ಐಡೆಂಟಿಟಿಯನ್ನು ಸೃಷ್ಟಿಸಿಬಿಟ್ಟಿತು!

ಹೀಗೇ ಒಮ್ಮೆ, ಆಯುಧಪೂಜೆಯ ಸಿಹಿಯ ಡಬ್ಬದೊಂದಿಗೆ ತಿಪಟೂರಿಗೆ ಬಂದವನು ಅಪ್ಪ - ಅಮ್ಮನ ನಿರ್ಭಾವುಕ ಮುಖಗಳನ್ನು ನೋಡಲಾಗದೆ ಸೀದಾ ಹೋಗಿದ್ದು ಅಕ್ಕನ ಮನೆಗೆ. ಅಲ್ಲಿ ಅವಳ ಮಕ್ಕಳ ಜೊತೆ ಸಿಹಿ ಸಿಹಿ ಮಾತುಗಳೊಂದಿಗೆ ದಿನ ಕಳೆಯುತ್ತಿದ್ದಾಗ ಅಕ್ಕ ಒಮ್ಮೆ ಕೇಳಿದಳು, "ಏನಾಯ್ತೋ, ನಿನ್ನ ಪ್ರೇಮಕಥೆ!".

ಅವಳಿಗೆ ನನ್ನ-ಮೀನಾಳ ಪ್ರೇಮ ಕಥೆಯ ಬಗ್ಗೆ ಅಷ್ಟಿಷ್ಟು ಗೊತ್ತಿತ್ತು, ಯಾರಾದರೊಬ್ಬರು ಆ ಬಗ್ಗೆ ಏನಾಯ್ತೆಂದು ಕೇಳಿದರೆ ಸಾಕೆಂದು ಕಾದಿದ್ದ ಮನ, ಥಟಕ್ಕನೆ ಅವಳಿಗೆ ನಡೆದ ಕಥೆಯನ್ನೆಲ್ಲಾ, ನನ್ನ ಆಣತಿಯನ್ನೂ ಮೀರಿ, ಎಲ್ಲವನ್ನೂ ಹೇಳಿ ಬಿಟ್ಟಿತ್ತು. ನೊಂದುಕೊಂಡ ಅವಳು, "ಯಾವುದಕ್ಕೂ ಹೆದರದೆ ಯಾವಾಗಲೂ ಎಲ್ಲದಕ್ಕೂ ಸೈ ಎಂದು ಮುಂದೆ ನುಗ್ಗುತ್ತಿದ್ದ ನಿನಗೆ ಈ ರೀತಿಯ ಸೋಲಾಗಬಾರದಿತ್ತು, ಆದರೂ ನನಗೆ ನಂಬಿಕೆಯಿದೆ, ನೀನು ಈ ಸೋಲಿನಿಂದ ಹೊರಬಂದು ಜೀವನದಲ್ಲಿ ಗೆಲ್ಲುವೆ" ಎಂದವಳ ಮಾತು ಮನಕ್ಕೆ ಸ್ವಲ್ಪ ಹರುಷ ನೀಡಿತ್ತು. ಶುಭ ಹಾರೈಸಿದ ಅಕ್ಕನಿಂದ ಬೀಳ್ಕೊಂಡು ಮತ್ತೆ ಬೆಂಗಳೂರಿನ ಯಾಂತ್ರಿಕ ಜೀವನಕ್ಕೆ ಮರಳಿದೆ.

ಕೆಲ ಸಮಯದ ನಂತರ ಮತ್ತೆ ಬಂದರು ಅಪ್ಪ, ನನ್ನನ್ನು ಹುಡುಕಿಕೊಂಡು. ಆಯುಧಪೂಜೆಯ ನಂತರ ಅಕ್ಕ, ಅಪ್ಪ, ಅಮ್ಮನ ನಡುವೆ ಅದೇನೇನು ಮಾತುಕತೆ ನಡೆದಿತ್ತೋ, ಅದೇನು ಮಸಲತ್ತು ಮಾಡಿದ್ದರೋ ಆಗ ನನಗೆ ಅರಿವಿರಲಿಲ್ಲ. ಒಟ್ಟಾರೆ ಹುಡುಕಿಕೊಂಡು ಬಂದ ಅಪ್ಪ, ನನಗೆ ಸಾಕಷ್ಟು ಬೆಣ್ಣೆ ಹೊಡೆದು, ಒಳ್ಳೆಯ ಸರ್ಕಾರಿ ಕೆಲಸ ಕೊಡಿಸುವುದಾಗಿ ನನ್ನ ಮನವೊಲಿಸಿ, ಇದ್ದ ಕೆಲಸ ಬಿಡಿಸಿ ಮತ್ತೆ ನನ್ನನ್ನು ತಿಪಟೂರಿಗೆ ಕರೆದುಕೊಂಡು ಹೊರಟರು. ಆದರೆ ಅಲ್ಲಿ ಹೋದ ನಂತರ ತಿಳಿಯಿತು ನನಗೆ, ಅವರೇಕೆ ಅಷ್ಟೊಂದು ಆಸಕ್ತಿ ತೆಗೆದುಕೊಂಡು ನನ್ನನ್ನು ಹುಡುಕಿಕೊಂಡು ಬಂದಿದ್ದು ಅಂತ!

ಅವರ ಪ್ಲಾನ್ ಈ ರೀತಿಯಿತ್ತು, ನಮ್ಮ ಗೌಡರ ಮನೆಗಳಲ್ಲಿ ಯಾರಾದರೂ ಒಬ್ಬ ಪದವೀಧರ ಹುಡುಗ ಸಿಗುತ್ತಾನೆಂದರೆ, ಅವನುದ್ದಕ್ಕೂ ಸುರಿದು, ಕನ್ಯಾದಾನ ಮಾಡಿ ಕೊಡಲು ಕನ್ಯಾ ಪಿತೃಗಳು ಸಿದ್ಧರಿರುತ್ತಿದ್ದರು. ಅಪ್ಪನ ತಂತ್ರದ ಪ್ರಕಾರ, ಸಕತ್ತಾಗಿ "ವರದಕ್ಷಿಣೆ" ತೆಗೆದುಕೊಂಡು, ಅದೇ ದುಡ್ಡನ್ನು ಯಾರಾದರೂ ಒಬ್ಬ ರಾಜಕಾರಣಿಯನ್ನು ಹಿಡಿದು, ಖರ್ಚು ಮಾಡಿ, ನನಗೊಂದು ಸರ್ಕಾರಿ ಕೆಲಸ ಕೊಡಿಸಿ, ಜೀವನದಲ್ಲಿ ನೆಲೆಯಾಗಿ ನಿಲ್ಲಿಸುವುದು! ಈ ತಂತ್ರವನ್ನು ಕಾರ್ಯರೂಪಕ್ಕಿಳಿಸಲು ಅಪ್ಪ, ನನ್ನ ಅಕ್ಕನನ್ನೇ ನನ್ನ ಮುಂದೆ ದಾಳವಾಗಿ ಆಟಕ್ಕಿಳಿಸಿಬಿಟ್ಟಿದ್ದರು.

ನನಗೆ ಇದು ಅರ್ಥವಾಗುವ ಹೊತ್ತಿಗೆ ನಾನು ಅಪ್ಪ, ಅಮ್ಮ, ಅಕ್ಕನ ಮಾತಿಗೆ ಮರುಳಾಗಿ ನಾಲ್ಕಾರು ಕಡೆ ಹೆಣ್ಣು ನೋಡುವ ಶಾಸ್ತ್ರಕ್ಕೆ ಹೋಗಿ, ನೋಡಲು ಚೆನ್ನಾಗಿಯೂ ಇದ್ದು, ಸಾಕಷ್ಟು ವಿದ್ಯಾವಂತರಾಗಿಯೂ ಇದ್ದ ಹೆಣ್ಣು ಮಕ್ಕಳನ್ನು ನೋಡಿ ಬಂದು, ನಾನು ಓಕೆ ಅಂದಿದ್ದರು ಸಹಾ ಆ ಸಂಬಂಧಗಳು ಮುರಿದು ಹೋಗಿದ್ದವು. ನನಗಾಗ ಆಶ್ಚರ್ಯವಾಗಿತ್ತು, ಅದು ಹೇಗೆ ಅವರು ನನ್ನನ್ನು ನಿರಾಕರಿಸಿದರು ಅಂತ! ಆದರೆ ನಿಜವಾದ ವಿಷಯವೇನೆಂದರೆ, ನನಗೆ ಹೆಣ್ಣು ತೋರಿಸಿದ ಶಾಸ್ತ್ರ ಮಾಡಿದ ಅಪ್ಪ-ಅಮ್ಮ ತೆರೆಯ ಹಿಂದೆ ದೊಡ್ಡ ವ್ಯಾಪಾರವನ್ನೇ ಶುರು ಮಾಡಿ ಬಿಟ್ಟಿದ್ದರು! ತುರುವೇಕೆರೆಯಲ್ಲಿ ನಾನು ನೋಡಿ ಒಪ್ಪಿ ಬಂದಿದ್ದ ರಾಜೇಶ್ವರಿ ಎಂಬ ಹುಡುಗಿಯ ಅಣ್ಣ, ತಿಪಟೂರಿನ ಬಸ್ ನಿಲ್ದಾಣದಲ್ಲಿ ಸಿಕ್ಕಿ, ಅಪ್ಪ-ಅಮ್ಮ ಮಾಡಿದ ಚೌಕಾಸಿ ವ್ಯಾಪಾರದ ಬಗ್ಗೆ ಹೇಳುವವರೆಗೂ ನನಗೆ ಈ ಬಗ್ಗೆ ಗೊತ್ತೇ ಆಗಿರಲಿಲ್ಲ. ನನಗೇ ಗೊತ್ತಿಲ್ಲದಂತೆ ಮದುವೆಯ ಮಾರುಕಟ್ಟೆಯಲ್ಲಿ ನನ್ನನ್ನು ಮಾರಾಟಕ್ಕಿಟ್ಟ ಅಪ್ಪ-ಅಮ್ಮನ ಬಗ್ಗೆ ನನಗೆ ಎಲ್ಲಿಲ್ಲದ ಸಿಟ್ಟು, ತಿರಸ್ಕಾರಗಳು ಮೂಡಿ, ಅವರನ್ನು ಹಿಗ್ಗಾ ಮುಗ್ಗಾ "ಕ್ಲಾಸ್" ತೆಗೆದುಕೊಂಡು, ಇನ್ನೆಂದೂ ಅವರು ನನ್ನ ಮದುವೆಯ ಬಗ್ಗೆ ತಲೆ ಹಾಕಬಾರದೆಂದು ತಾಕೀತು ಮಾಡಿಬಿಟ್ಟೆ.

ಇದೇ ಸಿಟ್ಟಿನಲ್ಲಿ ಅಕ್ಕನ ಮನೆಗೆ ಹೋಗಿ, ಅವಳಿಗೂ ಸಾಕಷ್ಟು ಮಂಗಳಾರತಿ ಮಾಡಿದೆ. ಆಗ ಅವಳು ಹೇಳಿದ ಒಂದು ವಿಷಯ ನನ್ನ ಎದೆ ತಟ್ಟಿತು. ಅವಳೇನೂ ನನ್ನನ್ನು ವರದಕ್ಷಿಣೆಯೊಡನೆ ಮದುವೆಯಾಗಲಿ ಎಂದು ಬಯಸಿರಲಿಲ್ಲವಂತೆ, ಅಪ್ಪ-ಅಮ್ಮನೇ ಅವಳನ್ನು ಹೇಗಾದರೂ ನನ್ನನ್ನು ಒಪ್ಪಿಸುವಂತೆ ಕಾಡಿ ದುಂಬಾಲು ಬಿದ್ದಿದ್ದರಂತೆ. ಇದರಿಂದ ಅವರ ಸಾಲಗಳೂ ಸಾಕಷ್ಟು ತೀರುತ್ತವೆಂಬ ನಿರೀಕ್ಷೆಯಲ್ಲಿದ್ದರಂತೆ. ಇದನ್ನು ಕೇಳಿ ನನ್ನ ಕಿವಿಗೆ ಕಾದ ಸೀಸ ಹೊಯ್ದಂತಾಯಿತು.

ಸಿಟ್ಟಿನ ಭರದಲ್ಲಿ, ವಿದ್ಯಾವಂತೆಯಾದ ನೀನೂ ಸಹ ಹೀಗೆ ಮಾಡಬಹುದೇ ಎಂದು ಕೂಗಾಡಿದಾಗ ಅವಳದು ಒಂದೇ ಶಾಂತ ಉತ್ತರ. "ಇಲ್ಲಿ ನಿನಗಾಗಿ ಇನ್ನೊಂದು ಜೀವ ಕಾದು ಕುಳಿತಿದೆ, ನಿನ್ನ ಪ್ರೇಮ ವೈಫಲ್ಯ, ಅಪ್ಪ-ಅಮ್ಮನ ವರದಕ್ಷಿಣೆಯ ಆಸೆ ನೋಡಿ ನಾನು ಅಸಹಾಯಕಳಾಗಿ ನಿನಗೆ ಆ ಬಗ್ಗೆ ಏನೂ ಹೇಳಲಾಗಲಿಲ್ಲ, ಈಗ ಹೇಳುತ್ತೇನೆ, ಕೇಳು. ಸುಮಾರು ಮೂರು ವರ್ಷಗಳಿಂದ ಈ ಹುಡುಗಿ, ನಿನಗಾಗಿ ಕನಸು ಕಾಣುತ್ತಾ, ಮದುವೆಯಾದರೆ ಈ ಜನ್ಮದಲ್ಲಿ ಅದು ನಿನ್ನನ್ನು ಮಾತ್ರ ಅಂತ ತೀರ್ಮಾನ ತೊಗೊಂಡು, ಬಂದ ಸಂಬಂಧಗಳನ್ನೆಲ್ಲಾ ನಿರಾಕರಿಸಿ, ನಿನ್ನ ದಾರಿ ಕಾಯುತ್ತಿದ್ದಾಳೆ, ಅವಳ ಈ ಒಮ್ಮುಖ ಪ್ರೇಮ, ಅವರ ಮನೆಯ ನೆಮ್ಮದಿಯನ್ನೇ ಹಾಳು ಮಾಡಿದೆ " ಎಂದ ಅಕ್ಕನ ಮಾತುಗಳು ನನ್ನ ಸಿಟ್ಟನ್ನೆಲ್ಲಾ ಜರ್ರನೇ ಇಳಿಸಿ, ಒಂದು ಕ್ಷಣ ನನ್ನನ್ನು ಅಯೋಮಯನನ್ನಾಗಿ ಮಾಡಿ ಬಿಟ್ಟಿತ್ತು.

ಸಾವರಿಸಿಕೊಂಡ ನಾನು ಅಕ್ಕನಿಗೆ ಹೇಳಿದೆ, "ಸರಿ, ಆ ಹುಡುಗಿಯನ್ನು ಕರೆಸು, ನಾನು ಅವಳ ಜೊತೆ ಮಾತಾಡಬೇಕು". ಅಕ್ಕನ ಮಗಳು ಉಷಾ, ಓಡಿ ಹೋಗಿ, ಆ ಸುಂದರಿಯನ್ನು ಕರೆ ತಂದೇಬಿಟ್ಟಳು, ನೋಡಿದರೆ ಅವಳು ಬೇರಾರೂ ಅಲ್ಲ, ನಾನು ಆಗಾಗ್ಗೆ ಕುಳಿತು ಬಿಯರ್ ಕುಡಿಯುತ್ತಾ, ದಮ್ ಹೊಡೆಯಲು ಹೋಗುತ್ತಿದ್ದ ಅಂಗಡಿ ನಂಜೇಗೌಡನ ತಂಗಿ ಕಲಾವತಿ!!

ನಾನು ಸಾಕಷ್ಟು ಸಲ ಅಕ್ಕನ ಮನೆಗೆ ಹೋದಾಗ ಅವಳು, ತಾನು ಪ್ರತಿ ದಿನ ಶುಶ್ರೂಷೆ ಮಾಡುತ್ತಿರುವ, ಕ್ಯಾನ್ಸರ್ ಪೀಡಿತನಾಗಿ ಸಾವಿನ ದಡದಲ್ಲಿ ನಿಂತಿರುವ ಒಬ್ಬ ವಯಸ್ಕ ರೋಗಿಯ ಬಗ್ಗೆ ಹೇಳುತ್ತಿದ್ದಳು. ನಾನೂ ಸಹ ಒಂದೆರಡು ಬಾರಿ ಅವರ ಮನೆಗೆ ಭೇಟಿ ಕೊಟ್ಟು ಅವರ ಆಗಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡು, ಕಾಲೇಜಿನಲ್ಲಿ, ಮನಃಶಾಸ್ತ್ರದ ವಿದ್ಯಾರ್ಥಿಯಾಗಿ, ಸಾವಿನ ಬಗ್ಗೆ, ಸಾವಿನ ಹೆದರಿಕೆಯ ಬಗ್ಗೆ ಮಾನವರಲ್ಲಿ ಹುಟ್ಟುವ ಭಾವನೆಗಳ ಬಗ್ಗೆ ನಾನು ಸಿದ್ಧಪಡಿಸುತ್ತಿದ್ದ ಪ್ರಬಂಧಕ್ಕಾಗಿ ಅವರ ಬಗ್ಗೆ ಕೆಲವಾರು ಲೇಖನಗಳನ್ನೂ ಬರೆದಿದ್ದೆ.
(ಮುಂದಿನ ಪುಟಕ್ಕೆ )

ಇವಳು ಅದೇ ತಿಮ್ಮೇಗೌಡರ ಮಗಳು! ಅದಾಗಲೇ ಕ್ಯಾನ್ಸರ್ ಆ ತಿಮ್ಮೇಗೌಡರನ್ನು ಬಲಿ ತೆಗೆದುಕೊಂಡಾಗಿತ್ತು, ಆರು ಗಂಡು ಹಾಗೂ ನಾಲ್ಕು ಹೆಣ್ಮಕ್ಕಳ ದೊಡ್ಡ ಸಂಸಾರದಲ್ಲಿ ಇವಳೇ ಕೊನೆಯ ಮಗಳಾಗಿದ್ದು, ಇಬ್ಬರು ಅಣ್ಣಂದಿರು ಮದುವೆಯಾಗಲು ಇವಳು ದೊಡ್ಡ ತೊಡಕಾಗಿದ್ದಳಂತೆ. ನನ್ನ ಕಾಲೇಜಿನ ದಿನಗಳ ಸಾಹಸಗಳನ್ನು ಅಕ್ಕ ಒಬ್ಬ ದೊಡ್ಡ ಹೀರೋನ ಕಥೆಯಂತೆ ವರ್ಣಿಸುವುದನ್ನು ಕೇಳಿ, ನಾನು ಅಕ್ಕನ ಮನೆಗೆ ಹೋಗುವಾಗೆಲ್ಲಾ, ಭಾವನನ್ನು ಹೆದರಿಸಲು ದೊಡ್ಡ ಹೀರೋನಂತೆ ಕೊಡುತ್ತಿದ್ದ ಫೋಸುಗಳನ್ನೆಲ್ಲಾ ನೋಡಿ, ಈ ಹಳ್ಳಿಯ ಹುಡುಗಿ, "ಕ್ಲೀನ್ ಬೌಲ್ಡ್" ಆಗಿ, ಮದುವೆಯಾದರೆ, ಜೀವನದಲ್ಲಿ ನನ್ನನ್ನೇ ಎಂದು ತೀರ್ಮಾನಿಸಿ, ಬಂದ ಸಂಬಂಧಗಳನ್ನೆಲ್ಲಾ ನಿರಾಕರಿಸಿ, ನನ್ನ ಅಕ್ಕನೊಡನೆ ತನ್ನ ಮನದ ಮಾತುಗಳನ್ನೆಲ್ಲಾ ಹೇಳಿಕೊಂಡು, ನನಗಾಗಿ, "ಅಹಲ್ಯೆ" ಯಂತೆ ಕಾಯುತ್ತಿದ್ದಳಂತೆ! ಮೀನಾಳ ಹಿಂದೆ ಬೆಂಗಳೂರಿಗೆ ಹೋಗಿ, ನನ್ನ ಮುಂದಿನ ವಿದ್ಯಾಭ್ಯಾಸಕ್ಕೂ ಕಲ್ಲು ಹಾಕಿಕೊಂಡು, ಅಲ್ಲಿಯೂ ಮುಟ್ಟದೆ, ಇಲ್ಲಿಯೂ ಮುಟ್ಟದೆ ತ್ರಿಶಂಕು ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದ ನನಗೆ ಈ ಹಳ್ಳಿಯ ಹುಡುಗಿಯ ಒಮ್ಮುಖ ಪ್ರೇಮ ದೊಡ್ಡ ಒಗಟಾಗಿ ಕಂಡಿತ್ತು.

ಅಕ್ಕನ ಮಗಳು ಉಷಾ ಕರೆದೊಡನೆ, ತನ್ನ ಮಾಮೂಲಿ ಹಳ್ಳಿಯುಡುಪಿನಲ್ಲಿ ನನ್ನ ಮುಂದೆ ಬಂದು ನಿಂತವಳನ್ನು ಹಾಗೇ ಅಡಿಯಿಂದ ಮುಡಿಯವರೆಗೂ ನೋಡಿದೆ. ಅದೇ ಮುಗ್ಧ ಮುಖ, ಅಪ್ಪ ಸಾವಿನ ಹಾಸಿಗೆಯಲ್ಲಿ ಮಲಗಿದ್ದರೂ, ಅವರನ್ನು ಖುಷಿಯಾಗಿಡಲು, ದಿನಾ ಏನಾದರೊಂದು ಹೊಸ ಮಾಂಸಾಹಾರಿ ಅಡುಗೆ ಮಾಡಿ, ಅವರಿಗೆ ತಿನ್ನಲಾಗದಿದ್ದರೂ, ಒಂದಿಷ್ಟು ತುತ್ತು ಮಾಡಿ ತಿನ್ನಿಸಿ, ಅವರು ಇರುವವರೆಗೂ ಅವರನ್ನು ಕಣ್ಣೆವೆಯಲ್ಲಿಟ್ಟು ಕಾಪಾಡಲು ಯತ್ನಿಸಿದ್ದ ತ್ಯಾಗಮೂರ್ತಿ, ಆ ಹಳ್ಳಿ ಹುಡುಗಿ, ನನ್ನ ಮುಂದೆ ತುಂಬಾ ಎತ್ತರಕ್ಕೆ ಬೆಳೆದು ನಿಂತು ನನ್ನನ್ನು ಕುಬ್ಜನನ್ನಾಗಿಸಿದ್ದಳು. ಆದರೂ ನನ್ನ ಬಿಂಕ ಬಿಡದೆ, ಅಕ್ಕನ ಮುಂದೆ, ಅವಳನ್ನು ಕೇಳಿದೆ, "ನೀನೇಕೆ ಬಂದ ಸಂಬಂಧಗಳನ್ನೆಲ್ಲಾ ನಿರಾಕರಿಸಿ ಮದುವೆಯಾಗದೆ ನಿನ್ನ ಅಣ್ಣಂದಿರಿಗೆ ನೋವು ಕೊಡುತ್ತಿದ್ದೀಯಾ? ಇದು ತಪ್ಪಲ್ಲವೇ ?"

ಅದಕ್ಕೆ ಅವಳು ಏನು ಹೇಳಿದಳು ಗೊತ್ತೇ ? "ಮಂಜಪ್ಪೋರೇ, ಅದೇಕೋ ಗೊತ್ತಿಲ್ಲ, ನಿಮ್ಮನ್ನ ಮೊದಲು ನಿಮ್ಮಕ್ಕನ ಮನೆಯಲ್ಲಿ ನೋಡಿದ ದಿನವೇ ನಾನು ನಿಮ್ಮನ್ನ ಪ್ರೀತಿಸಲು ಶುರು ಮಾಡ್ಬಿಟ್ಟೆ, ನನ್ನಲ್ಲಿ ನಾನೇ ತೀರ್ಮಾನ ಮಾಡ್ಬಿಟ್ಟೆ, ಮದ್ವೆ ಅಂತ ಈ ಜನ್ಮದಲ್ಲಿ ಆದ್ರೆ ಅದು ನಿಮ್ಮ ಜೊತೆ ಮಾತ್ರ, ಇಲ್ದಿದ್ರೆ ನನ್ಗೆ ಮದ್ವೇನೇ ಬೇಡ ಅಂತ, ಅದೇನು ಮಾಯೆ ಅಂತ ನನ್ಗೆ ಗೊತ್ತಿಲ್ಲ. ನಾನು ನಿಮ್ಮಷ್ಟು ಓದಿಲ್ಲ, ಆದ್ರೆ ಈ ಮಾತಂತೂ ನಿಜ, ನೀವು ನನ್ನ ಮದ್ವೆ ಮಾಡ್ಕೊಳ್ಳಿಲ್ಲಾಂದ್ರೆ ನಾನು ಹೀಗೇ ಇದ್ಬಿಡ್ತೀನೇ ಹೊರ್ತು ಬೇರೆ ಯಾರನ್ನೂ ಮದ್ವೆ ಮಾಡ್ಕೊಳ್ಳೋಲ್ಲಾ".

ಅವಳ ಈ ಮಾತು ಕೇಳಿ ಏನು ಹೇಳಬೇಕಂತ ಗೊತ್ತಾಗದೆ ಒದ್ದಾಡುತ್ತಿದ್ದೆ, ಆಗ ನಡುವೆ ಬಂದ ಅಕ್ಕ ಹೇಳಿದಳು. "ಇವಳು ನೀನು ಕಾಲೇಜಿನಲ್ಲಿ ಯಾವುದಾದರೂ ಒಂದು ಬಹುಮಾನ ಗೆದ್ದಾಗಲೆಲ್ಲಾ ಬಂದು ನನಗೆ ಹೇಳ್ತಾ ಇದ್ದಳು, ಇವತ್ತು ನಿಮ್ಮ ತಮ್ಮ ಅದು ಗೆದ್ರು, ಇದು ಗೆದ್ರು ಅಂತ, ನಿನ್ನ ಬಗ್ಗೆ ಅವಳು ಸುತ್ತ ಮುತ್ತಿನ ಹುಡುಗ-ಹುಡುಗಿಯರಿಂದ ಎಲ್ಲಾ ವಿಷಯ ಸಂಗ್ರಹ ಮಾಡಿಟ್ಟಿದ್ದಾಳೆ. ನಿನ್ನ ಹಾಗು ಮೀನಾಳ ಪ್ರೀತಿಯ ಬಗ್ಗೆಯೂ ಅವಳಿಗೆ ಗೊತ್ತು, ಆದರೆ ಅವಳು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ, ಅವಳ ಜೀವನದ ಅಂತಿಮ ಗುರಿ, ನಿನ್ನನ್ನು ಮದುವೆಯಾಗುವುದು ಅಷ್ಟೇ". ಈಗ ನಾನು ಅಕ್ಷರಶಃ ಮೂಕನಾಗಿ ಬಿಟ್ಟಿದ್ದೆ!

ನನ್ನದೆಂದು ಭ್ರಮಿಸಿ, ಮರೀಚಿಕೆಯ ಹಿಂದೆ ಹೋಗಿ, ಅವಮಾನಿತನಾಗಿ, ಕೈಗೆಟುಕದ ಕಾಮನಬಿಲ್ಲಿಗೆ ಕೈ ಚಾಚಿ, ಅದು ಸಿಕ್ಕದಿದ್ದಾಗ, ಜೀವನವೇ ವ್ಯರ್ಥವೆಂದುಕೊಂಡು, ಮನದ ಭಾವನೆಗಳನ್ನೆಲ್ಲಾ ಕೊಂದು ಕೊಂಡು, ಕಲ್ಲಾಗಿ ಬಿಟ್ಟಿದ್ದ ನನಗೆ ಇದೊಂದು ಹೊಸ ಅನುಭವವಾಗಿತ್ತು. ಅಪ್ಪ-ಅಮ್ಮನ ತೀವ್ರ ವಿರೋಧದ ನಡುವೆಯೂ ಅವಳನ್ನು ನನ್ನ ಬಾಳ ಸಂಗಾತಿಯಾಗಿ ಸ್ವೀಕರಿಸುವ ನಿರ್ಧಾರ ತೆಗೆದುಕೊಂಡೆ. ಅವರಣ್ಣ ನಂಜೇಗೌಡನೊಡನೆ ಮಾತಾಡಿ, ಯಾವುದೇ ವರದಕ್ಷಿಣೆ, ವರೋಪಚಾರವಿಲ್ಲದೆ, "ಸಿಂಪಲ್ಲಾಗಿ" ಅವರ ಮನೆಯ ಮುಂದೆ ಚಪ್ಪರ ಹಾಕಿಸಿ ನನಗೆ ಧಾರೆಯೆರೆದು ಕೊಡಬೇಕೆಂದ ನನ್ನ ಮಾತಿಗೆ ಅಕ್ಕ, ಭಾವ ಬೆಂಗಾವಲಾಗಿ ನಿಂತಾಗ, ನನಗೆ ನನ್ನ ಜನ್ಮ ಸಾರ್ಥಕ ಎನ್ನಿಸಿತು.

ಪುರೋಹಿತರ ಮುಂದೆ, ಅಗ್ನಿ ಸಾಕ್ಷಿಯಾಗಿ, "ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ" ಎಂದು ಪ್ರಮಾಣಿಸಿ, ಸಪ್ತಪದಿ ತುಳಿದು, ಕಲಾವತಿಯನ್ನು ನನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಿದೆ. 18 ವರ್ಷಗಳ ನಮ್ಮ ಸಿಹಿ ಸಂಸಾರ, ಇಂದು ಒಬ್ಬ ಮಗಳು, ಒಬ್ಬ ಮಗನ ಸಿಹಿಫಲದ ಜೊತೆಗೆ ಯಶಸ್ವಿಯಾಗಿ ನಡೆಯುತ್ತಿದೆ. ತನ್ನ ಗುರಿ ಸಾಧನೆಗಾಗಿ, ತನ್ನ ಧರ್ಮಕ್ಕಾಗಿ, ಪ್ರೀತಿಯನ್ನು ಕೊಂದು ಜಾಗ ಖಾಲಿ ಮಾಡಿ ಹೋದ ನನ್ನ "ಮೀನಾ"ಳ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ ಕಲಾ, ನನ್ನ ಮುದ್ದಿನ ಮಡದಿಯಾಗಿ, ನನ್ನ ಮಕ್ಕಳ ಪ್ರೀತಿಯ ತಾಯಿಯಾಗಿ, ನನ್ನ ಸಕಲ ಸಂಬಂಧಗಳಲ್ಲಿ ನೆಚ್ಚಿನ ಕಲಮ್ಮನಾಗಿ, ಕಲರ್ ಕಲರ್ ಕನಸುಗಳನ್ನು ನನ್ನಲ್ಲಿ ಬೆಳಗಿಸಿ, ನನ್ನ ಇಂದಿನ ಯಶಸ್ವಿ ಜೀವನದ ಹಿಂದೆ ಆರದ ಬೆಳಕಾಗಿ ನಿಂತು ಬಿಟ್ಟಳಲ್ಲಾ !

" ಬಾಳೋದು ಹೆಣ್ಣಿಂದ, ಮನುಜ ಬೀಳೋದು ಹೆಣ್ಣಿಂದ,
ಆಳೋದು ಹೆಣ್ಣಿಂದ, ಅವನು ಅಳುವುದು ಹೆಣ್ಣಿಂದ"
ಎಂಬ ಚಲನಚಿತ್ರ ಗೀತೆ ನಮ್ಮ ಬಾಳಿನಲ್ಲಿ ನಿಜವಾಯಿತು.

ಇದಲ್ಲವೇ ಆ ದೇವರ ಆಟ ! ಇದಲ್ಲವೇ ನಿಜವಾದ ಪ್ರೀತಿಯ ಮಾಟ!!

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments