Webdunia - Bharat's app for daily news and videos

Install App

ಶುಕ್ರಾಚಾರ್ಯರಿಗೇಕೆ ಒಂಟಿ ಕಣ್ಣು

Webdunia
ಬಲಿಪಾಡ್ಯಮಿಗೂ ಶುಕ್ರಾಚಾರ್ಯರ ಒಂಟಿ ಕಣ್ಣಿಗೂ ಸಂಬಂಧವಿದೆ. ಬಲಿಚಕ್ರವರ್ತಿಯು ವಾಮನನಿಗೆ ದಾನ ಮಾಡುವ ಸಂದರ್ಭದಲ್ಲಿ ಶುಕ್ರಚಾರ್ಯರು ಅಡ್ಡ ಬಂದಕಾರಣ ಅವರು ಕಣ್ಣನ್ನು ಕಳೆದುಕೊಳ್ಳಬೇಕಾಯಿತು ಎಂದು ಪುರಾಣ ಹೇಳುತ್ತದೆ. ಆ ಕಥೆ ಹೀಗಿದೆ.

ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ. ಆತನು ಮಹಾ ವಿಷ್ಣುಭಕ್ತ. ಆತನ ಮಗ ವಿರೋಚನ. ವಿರೋಚನನ ಪುತ್ರನೇ ಬಲಿಚಕ್ರವರ್ತಿ. ಈತನು ಕೂಡಾ ವಿಷ್ಣುಭಕ್ತನೇ. ಆದರೆ ರಾಕ್ಷಸ ವಂಶದಲ್ಲಿ ಹುಟ್ಟಿದವನಾದ್ದರಿಂದ ರಜೋಗುಣಗಳು ಹೆಚ್ಚಿದ್ದವು. ಅಂದರೆ ಹಿಂಸಾ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದನು.

ಈತನ ರಾಜ್ಯವು ಸುಭಿಕ್ಷವಾಗಿತ್ತು. ವಿಷ್ಣುವನ್ನು ಪೂಜಿಸುವುದರೊಂದಿಗೆ ಇತರರಿಗೆ ಹಿಂಸೆ ನೀಡುತ್ತಿದ್ದನು. ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು. ಋಷಿಪತ್ನಿಯರನ್ನು ಹಿಂಸಿಸುತ್ತಿದ್ದನು. ಈತನನ್ನು ಸಂಹಾರಮಾಡಬೇಕೆಂಬ ಕೋರಿಕೆಯನ್ನು ಋಷಿಗಳು ವಿಷ್ಣುಪರಮಾತ್ಮನಲ್ಲಿ ಇಟ್ಟರು.

ಅದೇ ಸಮಯಕ್ಕೆ ಬಲಿಚಕ್ರವರ್ತಿಗೆ ಅಶ್ವಮೇಧಯಾಗ ಮಾಡಬೇಕೆಂಬ ಯೋಚನೆ ಬಂತು. ಈ ಯಾಗ ಮಾಡುವಾಗ ಯಾರೇ ಬರಲಿ, ಬಂದವರಿಗೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡನು.

ಇದೇ ಸಮಯದಲ್ಲಿ ಬಲಿಚಕ್ರವರ್ತಿಯ ಸಂಹಾರಕ್ಕೆ ಸೂಕ್ತ ಸಮಯವೆಂದು ಭಾವಿಸಿದ ವಿಷ್ಣುವು, ವಾಮನ ರೂಪವನ್ನು ತಾಳಿ ಯಾಗ ನಡೆಯುವ ಸ್ಥಳಕ್ಕೆ ಬಂದನು. ಬಂದವನೇ ತನಗೆ ದಾನ ನೀಡಬೇಕೆಂದು ಕೇಳಿಕೊಂಡನು.

ಇದರ ಮರ್ಮವರಿತ ಶುಕ್ರಾಚಾರ್ಯ ಎಂಬ ಋಷಿಯು ಈ ಕೆಲಸ ಮಾಡಬೇಡ ಎಂಬುದಾಗಿ ಬಲಿಚಕ್ರವರ್ತಿಗೆ ಸಲಹೆಯಿತ್ತರು. ಆದರೆ ಋಷಿಮುನಿಯ ಈ ಮಾತಿಗೆ ಬಲಿಚಕ್ರವರ್ತಿ ಬೆಲೆ ಕೊಡಲಿಲ್ಲ. ದಾನಕ್ಕೆ ತಯಾರಿ ನಡೆಯಿತು.

ದಾನ ನೀಡುವ ಮೊದಲು ಸಂಪ್ರೋಕ್ಷಣೆ ಬಿಡುವ ಪದ್ಧತಿಯಿದೆ. ಅಂದರೆ ತಮ್ಮ ಕಮಂಡಲದಲ್ಲಿ ನೀರನ್ನು ತೆಗೆದು ಅದನ್ನು ದಾನ ಕೊಡುವವರ ಕೈಗೆ ಹಾಕಲಾಗುವುದು. ಈ ಸಮಯದಲ್ಲಿ ಶುಕ್ರಾಚಾರ್ಯರು ಬಲಿಚಕ್ರವರ್ತಿಯನ್ನು ಉಳಿಸುವ ಸಲುವಾಗಿ ಕಪ್ಪೆರೂಪ ತಾಳಿ ಕಮಂಡಲದ ರಂಧ್ರದಲ್ಲಿ ಸೇರಿಕೊಂಡರು. ಹಾಗಾಗಿ ಸಂಪ್ರೋಕ್ಷಣೆ ಮಾಡಬೇಕಾದರೆ ನೀರು ಹೊರಚೆಲ್ಲುತ್ತಿರಲಿಲ್ಲ.

PTI
ಶುಕ್ರಾಚಾರ್ಯರ ಕುಯುಕ್ತಿಯನ್ನು ಅರಿತ ವಿಷ್ಣು ಪರಮಾತ್ಮ ದರ್ಭೆಯನ್ನು ತೆಗೆದುಕೊಂಡು ಕಮಂಡಲದೊಳಕ್ಕೆ ಕಸ ಸಿಕ್ಕಿಕೊಂಡಂತಿದೆ ಅದನ್ನು ತೆಗೆಯುತ್ತೇನೆ ಎನ್ನುತ್ತಾ ಎಂದು ಕಮಂಡಲದ ನಾಳಕ್ಕೆ ಚುಚ್ಚಿದನು. ಅದು ಕಪ್ಪೆಯ ರೂಪದಲ್ಲಿದ್ದ ಶುಕ್ರಾಚಾರ್ಯರ ಕಣ್ಣನ್ನು ಚುಚ್ಚಿತು. ಹೀಗಾಗಿ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಂಡರು.

ಸಂಪ್ರೋಕ್ಷಣೆ ಸರಾಗವಾಗಿ ನೆರವೇರಿತು. ಮುಂದೆ ಬಲಿಚಕ್ರವರ್ತಿ ತಮಗೇನು ನೀಡಬೇಕೆಂದು ವಾಮನನಲ್ಲಿ ಕೇಳಿಕೊಂಡನು. ಆಗ ವಾಮನನು ನನಗೆ ಮೂರು ಹೆಜ್ಜೆ ಜಾಗ ನೀಡಿದರೆ ಸಾಕು ಎಂದು ಹೇಳಿ ತ್ರಿವಿಕ್ರಮನಾದನು. ತ್ರಿವಿಕ್ರಮ ಎಂದರೆ ಬಹಳ ಅಗಲವಾದ ಪಾದಗಳುಳ್ಳವ ಎಂದರ್ಥ. ಸರಿ ಎಂದು ಬಲಿಚಕ್ರವರ್ತಿ ನಿನ್ನ ಜಾಗವನ್ನು ತೆಗೆದುಕೋ ಎಂದನು.

ತ್ರಿವಿಕ್ರಮನ ಒಂದನೇ ಹೆಜ್ಜೆ ಇಡೀ ಭೂಮಿಯನ್ನು ಆವರಿಸಿತು. ಎರಡನೇ ಹೆಜ್ಜೆಯನ್ನು ಆಕಾಶದ ಮೇಲಿಟ್ಟನು. ಮೂರನೇ ಹೆಜ್ಜೆ ಎಲ್ಲಿಡಬೇಕೆಂದು ಚಕ್ರವರ್ತಿಯನ್ನು ಕೇಳಿದಾಗ, ಬೇರೇನೂ ತೋಚದ ಬಲಿ, ತನ್ನ ತಲೆಯ ಮೇಲಿಡುವಂತೆ ಕೇಳಿಕೊಂಡನು. ಮೂರನೇ ಹೆಜ್ಜೆಯನ್ನು ಆತನ ತಲೆಮೇಲಿಟ್ಟು ತ್ರಿವಿಕ್ರಮನು ಬಲಿಚಕ್ರವರ್ತಿಯನ್ನು ಪಾತಾಳಲೋಕಕ್ಕೆ ತಳ್ಳಿದನು.

ಆದರೂ, ಬಲಿಚಕ್ರವರ್ತಿಯ ಭಕ್ತಿಗೆ ಮೆಚ್ಚಿದ ವಿಷ್ಣುವು ವರ ಒಂದನ್ನು ನೀಡಿದ. ಆಶ್ವೀಜ ಮಾಸದಲ್ಲಿ ಮೂರು ದಿವಸಗಳ ಕಾಲ ನೀನು ಭೂಲೋಕಕ್ಕೆ ಬರಬಹುದು. ಅಲ್ಲಿ ನಿನ್ನನ್ನು ಜನತೆ ಪೂಜೆಗೈಯುವರು. ಇದರ ಫಲವಾಗಿಯೇ ದೀಪಾವಳಿ ಸಮಯದಲ್ಲಿ ಎಲ್ಲರೂ ದೀಪ ಹಚ್ಚಿ ಬಲೀಂದ್ರ ಪೂಜೆ ಕೈಗೊಳ್ಳುತ್ತಾರೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments