ತಿರುಪತಿ ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಶನಿವಾರ ಸಂಜೆ ಅದ್ದೂರಿಯ ಪೆದ್ದಶೇಷ ವಾಹನ ಉತ್ಸವ ನಡೆದಿದ್ದು, ಭಾನುವಾರ ಬೆಳಿಗ್ಗೆ ಚಿನ್ನ ಶೇಷ ವಾಹನ ಉತ್ಸವ ಹಾಗೂ ಸಾಯಂಕಾಲ ಹಂಸ ವಾಹನ ಉತ್ಸವಗಳು ವೈಭವದಿಂದ ಜರುಗಿದವು.
ಸಾಯಂಕಾಲ ಉಯ್ಯಾಲೆ ಸೇವೆ (ಊಂಜಲ್ ಸೇವಾ) ಬಳಿಕ ಹಂಸವಾಹನದಲ್ಲಿ ಶ್ರೀದೇವರನ್ನು ಕುಳ್ಳಿರಿಸಿ ತಿರುಮಲದ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆಯ ಮೂಲಕ ಒಯ್ದಾಗ ಸಾವಿರಾರು ಭಕ್ತರು ಈ ವೈಭವನ್ನು ಕಂಡು ಪುನೀತರಾದರು.
ಸೆ.17ರಂದು ಬೆಳಿಗ್ಗೆ ಸಿಂಹ ವಾಹನ ಉತ್ಸವ ಹಾಗೂ ರಾತ್ರಿ ಉಯ್ಯಾಲೆ ಸೇವೆ ನೆರವೇರಿಸಲಾಗುತ್ತದೆ. ಆ ಬಳಿಕ ದೇವರ ವಿಗ್ರಹಗಳನ್ನು ಮುತ್ಯಪುಪಂದಿರಿ (ಮುತ್ತಿನ ಛತ್ರ ಇರುವ) ವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ಒಯ್ಯಲಾಗುತ್ತದೆ.
ದೇಶ ವಿದೇಶದಿಂದ ಭಕ್ತಾದಿಗಳು ತಿರುಮಲ ಸನ್ನಿಧಾನಕ್ಕೆ ಆಗಮಿಸುತ್ತಿದ್ದು, ರಾಜಬೀದಿಗಳೆಲ್ಲವೂ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ. ಬಿಗಿ ಪೊಲೀಸ್ ಪಹರೆಯನ್ನು ಕೂಡ ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದೆ.