ಕನ್ನಡದ ಸರ್ವಜ್ಞ ವಚನಗಳನ್ನು ಮಲಯಾಳಂ ಹಾಗೂ ಇಂಗ್ಲಿಷ್ಗೆ ಭಾಷಾಂತರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಯತ್ನಕ್ಕೆ ಮುಂದಾಗಿದ್ದು, ಈ ಕುರಿತು ಐದು ದಿನಗಳ ಅನುವಾದ ಕಮ್ಮಟವು ಅ.11ರಿಂದ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಿತು.
ಬೆಂಗಳೂರಿನ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಾದೇಶಿಕ ಕೇಂದ್ರದ ಅನುವಾದ ವಿಭಾಗ 'ಶಬ್ದನ' ದ ಗೌರವ ನಿರ್ದೇಶಕ ಪ್ರೊ. ಟಿ.ವೆಂಕಟೇಶ ಮೂರ್ತಿ ಉದ್ಘಾಟಿಸಿದರು
ಸಾಹಿತ್ಯ ಅಕಾಡೆಮಿಯ ಸಹಾಯಕ ಸಂಪಾದಕಿ ಡಾ. ಟಿ.ಆರ್.ಮೀನಲೋಚನಿ ಮಾತನಾಡಿ, ಸಾಹಿತ್ಯದ ಅನುವಾದಗಳು ಈ ರೀತಿಯಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ, ಇಂತಹ ಕೆಲಸ ಎಲ್ಲಾ ಭಾಷೆಗಳಲ್ಲೂ ನಡೆಯಬೇಕೆಂದು ಹೇಳಿ ಅಕಾಡೆಮಿಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲಯಾಳಂ ಅನುವಾದ ಕಮ್ಮಟ ನಿರ್ದೇಶಕ ಡಾ. ವಿ.ಗೋಪಾಲಕೃಷ್ಣ ಮಾತನಾಡಿ, ಕೇಂದ್ರ ಸಾಹಿತ್ಯ ಅಕಾಡೆಮಿಯು ಕೈಗೊಂಡಿರುವ ಇಂತಹ ಸಾಹಿತ್ಯಕ ಕಾರ್ಯಕ್ರಮ ಜನಮೆಚ್ಚುಗೆ ಪಡೆದು ಪರಸ್ಪರ ಪ್ರದೇಶಗಳ ವೈವಿಧ್ಯಮಯ ಉಪಸಂಸ್ಕೃತಿ ಮತ್ತಷ್ಟು ಬೆಸುಗೆಗೊಳ್ಳಲು ಅನುಕೂಲವಾಗುತ್ತದೆ. ಅಕಾಡೆಮಿಯ ಕೆಲಸ ನಿಜವಾಗಿಯೂ ಉಪಯುಕ್ತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಸಿದ್ಧ ಕನ್ನಡ-ಮಲಯಾಳಂ ಅನುವಾದಕ ಪ್ರೊ.ಎಂ.ರಾಮ, ಡಾ.ಬಿವಿ.ಸತ್ಯನಾರಾಯಣ್ ಭಟ್, ಪಯ್ಯನ್ನೂರು ಕುಂಞಿರಾಮನ್, ಕೆ.ವಿ.ಕುಮಾರನ್, ಕೆ.ಕೆ.ನಾಯರ್, ಪ್ರೊ.ಪಾರ್ವತಿ ಜಿ. ಐತಾಳ್ ಅನುವಾದಕರಾಗಿ ಭಾಗವಹಿಸಿದ್ದರು.
' ಶಬ್ದನ' ದ ಉಪಸಂಪಾದಕ ಪ್ರೊ.ಕೆ.ಎಸ್.ಮಧುಸೂಧನ ವಂದಿಸಿದರು. ವಿವಿಧ ಪ್ರದೇಶಗಳ ಅನುವಾದಕರು ಉಪಸ್ಥಿತರಿದ್ದರು.