Select Your Language

Notifications

webdunia
webdunia
webdunia
webdunia

ಮಾ.16: ಕನ್ನಡ ಬ್ಲಾಗಿಗರು ಸಮಾವೇಶಗೊಳ್ಳುತ್ತಿದ್ದಾರೆ...

ಮಾ.16: ಕನ್ನಡ ಬ್ಲಾಗಿಗರು ಸಮಾವೇಶಗೊಳ್ಳುತ್ತಿದ್ದಾರೆ...
ಕನ್ನಡ ಬ್ಲಾಗ್ ಜಗತ್ತು ಎಂದಿಗಿಂತಲೂ ವೇಗದಲ್ಲಿ ಬೆಳೆಯತೊಡಗಿದೆ. ಹಲವಾರು ಬ್ಲಾಗ್ ನಕ್ಷತ್ರಗಳು ಅಂತರ್ಜಾಲವೆಂಬ ಬಾನಂಗಳಲ್ಲಿ ಮಿನುಗುತ್ತಿವೆ, ಮಿಂಚುತ್ತಿವೆ. ಬ್ಲಾಗ್ ಬರೆಯುವವರ ಸಮಾವೇಶ ಮಾಡಿದರೆ ಹೇಗೆ? ಇದು ಕನ್ನಡ ಬ್ಲಾಗ್ ಜಗತ್ತಿಗೆ ಹೊಸದು. ಇಂಥದ್ದೊಂದು ಪ್ರಯತ್ನವನ್ನು ಮಾಡಿದೆ ಬೆಂಗಳೂರಿನ 'ಪ್ರಣತಿ' ಎಂಬ ಪ್ರಕಾಶನ ಸಂಸ್ಥೆ.

ಕನ್ನಡ ಅಂತರ್ಜಾಲ ಲೋಕದಲ್ಲಿ ಅದೆಷ್ಟೋ ಬ್ಲಾಗುಗಳಿದ್ದು, ಅವುಗಳ ಪ್ರತಿಕ್ರಿಯೆ ವಿಭಾಗದ ಮೂಲಕ ಪರಸ್ಪರ ಬ್ಲಾಗುಗಳಿಗೆ ಕಾಮೆಂಟ್ ನೀಡುತ್ತಾ, ಪರಸ್ಪರ ಪರಿಚಯವಾಗಿ ಮಿತ್ರತ್ವ ಬೆಳೆಸಿಕೊಂಡವರು ಹಲವರು. ಹೆಚ್ಚಿನವರು ಮುಖತಃ ಭೇಟಿಯಾಗಿದ್ದಿಲ್ಲ. ಬೇರೆ ಭಾಷೆಯ, ವಿಶೇಷವಾಗಿ ಇಂಗ್ಲಿಷ್ ಬ್ಲಾಗ್ ಲೇಖಕರು ಅಲ್ಲಲ್ಲಿ ಸಮಾವೇಶಗೊಂಡು ಸಂಘ ಕಟ್ಟಿಕೊಂಡಿರುವುದರ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದರೆ ಕನ್ನಡದಲ್ಲಿ ಇದೊಂದು ಹೊಸ ಮತ್ತು ದೂರಗಾಮಿ ಪರಿಣಾಮವುಳ್ಳ ಪ್ರಯತ್ನವಾಗಿದ್ದು, ಕನ್ನಡ ಬ್ಲಾಗ್ ಲೋಕದ ತಾರೆಗಳು ಅಂದು ಪರಸ್ಪರ ಭೇಟಿಯಾಗುವ ತರಾತುರಿಯಲ್ಲಿದ್ದಾರೆ.

ಮಾರ್ಚ್ 16ರ ಭಾನುವಾರ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಈ ಸಮಾವೇಶ ಏರ್ಪಡಿಸಲಾಗಿದ್ದು, ಅಂತರ್ಜಾಲ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಮತ್ತು ಪ್ರಥಮ ಅಂತರ್ಜಾಲ ತಾಣ ಎಂಬ ಉಲ್ಲೇಖದ 'ವಿಶ್ವಕನ್ನಡ'ದ ರೂವಾರಿ ಡಾ.ಯು.ಬಿ.ಪವನಜ, 'ದಟ್ಸ್ ಕನ್ನಡ' ಸಂಪಾದಕರಾದ ಶ್ಯಾಮ್ ಸುಂದರ್, ಬ್ಲಾಗುಗಳನ್ನು ಕಲೆಹಾಕುವ ವೇದಿಕೆಯಾಗಿರುವ 'ಸಂಪದ'ದ ಹರಿಪ್ರಸಾದ್ ನಾಡಿಗ್ ಮತ್ತು ಕೆಂಡಸಂಪಿಗೆ ಎಂಬ ತಾಣದ ಅಬ್ದುಲ್ ರಶೀದ್ ಅವರು ಬ್ಲಾಗಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ರೀತಿಯ ನೆಟ್ ಕನ್ನಡಿಗರನ್ನು ಒಂದುಗೂಡಿಸುವ ಕಾರ್ಯಕ್ಕೆ 'ಪ್ರಣತಿ' ಪ್ರಕಾಶನ ಸಂಸ್ಥೆ ಎಲ್ಲ ಬ್ಲಾಗಿಗರನ್ನು ಬ್ಲಾಗಿಗರ ಮೂಲಕವೇ ಆಹ್ವಾನಿಸುತ್ತಿದೆ. ಇಂಥದ್ದೊಂದು ಪ್ರಯತ್ನಕ್ಕೆ ವೆಬ್‌ದುನಿಯಾ ಶುಭ ಹಾರೈಕೆ.

Share this Story:

Follow Webdunia kannada